ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ(Daramasthala) ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B. Y. Vijayendra) ಅವರು ಇಂದು ಬೆಳಗ್ಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ದಾರೆ.
ಧರ್ಮಸ್ಥಳದಲ್ಲಿ ಈ ಹಿಂದೆ ಯೋಜಿಸಲಾಗಿದ್ದ ‘ಆಣೆ-ಪ್ರಮಾಣ’ ನಿರ್ಧಾರ ರದ್ದಾದ ಬೆನ್ನಲ್ಲೇ ವಿಜಯೇಂದ್ರ ಅವರು ಗುರುವಾರ ರಾತ್ರಿ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಇಂದಿನ ಭೇಟಿ ವೇಳೆ ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ ಮತ್ತು ಕರಾವಳಿ ಭಾಗದ ಶಾಸಕರು ಸಾಥ್ ನೀಡಿದರು.
ಅಡ್ಡ ಮತದಾನ ಮಾಡಿದವರ ಪತ್ತೆಗೆ ಹಾಗೂ ಪಕ್ಷದೊಳಗಿನ ಭಿನ್ನಮತ ಶಮನಗೊಳಿಸಲು ವಿಜಯೆಂದ್ರ ಈಗ ದೇವರ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಜಯೇಂದ್ರ ನಡೆಸಿದ ಈ ಭೇಟಿ ಕೇವಲ ಧಾರ್ಮಿಕ ಭೇಟಿಯಲ್ಲ, ಬದಲಿಗೆ ಇದೊಂದು ರಾಜಕೀಯ ‘ಧರ್ಮ ಪರೀಕ್ಷೆ’ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಗರಣ ಆರೋಪ – ಸಿಬಿಐ ತನಿಖೆಗೆ ಸಿ.ಟಿ. ರವಿ ಪಟ್ಟು
ಧರ್ಮಸ್ಥಳದ ಸಭೆಯ ಯೋಜನೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ, ಪಕ್ಷದ ಕೆಲವು ನಾಯಕರು ಈ ಇಡೀ ಗೊಂದಲಕ್ಕೆ ವಿಜಯೇಂದ್ರ ಅವರನ್ನೇ ದೂಷಿಸಲು ಆರಂಭಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಈಗ ಎಲ್ಲಾ ಶಾಸಕರನ್ನು ಕರೆದೊಯ್ಯುವ ನಿರ್ಧಾರ ಕೈಬಿಟ್ಟು ತಾವು ಒಬ್ಬರೇ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಮಾಡಿದ್ದಾರೆ.
