ನವದೆಹಲಿ: ಮಾರ್ಚ್ 31 ರವರೆಗೆ ದೇಶಾದ್ಯಂತ ಸಂಚರಿಸುವ ಎಲ್ಲ ರೈಲು ಪ್ರಯಾಣಿಕರ ರೈಲು, ಮೆಟ್ರೋ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೊರೊನಾ ಪೀಡಿತರ ಸಂಖ್ಯೆ 350ರ ಗಡಿ ದಾಟುತ್ತಿದ್ದಂತೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇಂದು ಬೆಳಗ್ಗೆ ರೈಲ್ವೇ ಬೋರ್ಡ್ ತುರ್ತು ಸಭೆ ಸೇರಿ ಈ ನಿರ್ಧಾರವನ್ನು ಕೈಗೊಂಡಿದೆ. ಪ್ರಯಾಣಿಕ ರೈಲು ಮಾತ್ರ ಸ್ಥಗಿತಗೊಂಡಿದ್ದು ಗೂಡ್ಸ್ ರೈಲುಗಳ ಸೇವೆ ಇರಲಿದೆ.
ಮಾರ್ಚ್ 12 ಮತ್ತು ಮಾರ್ಚ್ 16 ರಂದು ರೈಲಿನಲ್ಲಿ ಪ್ರಯಾಣಿಸಿದ ಒಟ್ಟು 16 ಮಂದಿ ಕೊರೊನಾ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಈ ಮೊದಲು ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯರಾತ್ರಿಯವರೆಗೆ ಎಲ್ಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಈಗ ಕೊರೊನಾ ಪೀಡಿತರ ಸಂಖ್ಯೆ ಭಾರೀ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಎಲ್ಲ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.
ಇದರ ಜೊತೆ ಮೆಟ್ರೋ ರೈಲು ಮತ್ತು ಅಂತರ್ ರಾಜ್ಯ ಬಸ್ ಸಂಚಾರ ಸಹ ಸ್ಥಗಿತಗೊಳಿಸಲಾಗಿದೆ.