ಹುಬ್ಬಳ್ಳಿ: ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ವೇ ಕಾರ್ಯ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರ ಕೈಯಲ್ಲಿದ್ದ ಕಡತಗಳನ್ನು ಕಸಿದುಕೊಂಡು ದುಷ್ಕರ್ಮಿಗಳು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಹುಬ್ಬಳ್ಳಿಯ ಗೌಳಿ ಗಲ್ಲಿಯಲ್ಲಿ ನಡೆದಿದೆ.
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತದ ಆದೇಶದ ಮೇರೆಗೆ ಹಾಗೂ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸರ್ವೇ ಮಾಡಲು ಆಗಮಿಸಿದ ಆಶಾ ಕಾರ್ಯಕರ್ತೆಯರಿಗೆ ದುಷ್ಕರ್ಮಿಗಳು ಕೆಲಸ ಮಾಡಲು ಅಡ್ಡಿಪಡೆಸಿದ್ದಾರೆ. ಗೌಳಿ ಗಲ್ಲಿಯ ಕೆಲವು ಪುಡಾರಿಗಳು ಆಶಾ ಕಾರ್ಯಕರ್ತೆಯರ ಬಳಿಯಿದ್ದ ದಾಖಲೆಗಳನ್ನು ಕಸಿದುಕೊಂಡು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರಾದ ನಾಗವೇಣಿ ಪಾನಗಲ್, ಲತಾ ಶ್ರೀರಾಮ ಮೇಲೆ ದೌರ್ಜನ್ಯ ನಡೆಸಲಾಗಿದೆ.
ಸರ್ವೇ ಮಾಡುತ್ತಿದ್ದ ವೇಳೆ ಕಡತಗಳನ್ನು ಕಸಿದುಕೊಂಡು ನಮ್ಮ ಜಮಾತ್ನಲ್ಲಿ ಯಾವುದೇ ಮಾಹಿತಿಯಿಲ್ಲ ಎಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.