ಬೆಂಗಳೂರು: ಮಾರಕ ಕೊರೊನಾ ವೈರಸ್ ದಿನೇ ದಿನೇ ಕರ್ನಾಟಕದಲ್ಲಿ ಹರಡುತ್ತಲೇ ಇದೆ. ಈಗಾಗಲೇ 10 ಪಾಸಿಟಿವ್ ಕೇಸ್ ಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇತ್ತ ಕೊರೊನಾ ತಡೆಗೆ ಸರ್ಕಾರ ಕೂಡಾ ಅನೇಕ ಕ್ರಮಗಳನ್ನ ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ. ಆದ್ರೆ ಈ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ಮೈಮರೆಯುತ್ತಿದೆ ಅಂತ ಅನ್ನಿಸುತ್ತಿದೆ. ರಾಜ್ಯಾದ್ಯಂತ ಕೊರೊನಾ ಬಗ್ಗೆ ಎಚ್ಚರವಹಿಸಿರೋ ಸರ್ಕಾರ ಶಕ್ತಿಸೌಧ ವಿಧಾನಸೌಧದಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದನ್ನ ಮರೆತು ಹೋಗಿದೆ.
ಈಗಾಗಲೇ ರಾಜ್ಯಾದ್ಯಂತ ಶಾಲಾ-ಕಾಲೇಜ್, ಬಾರ್, ಪಬ್, ಮಾಲ್ ಎಲ್ಲವನ್ನೂ ಬಂದ್ ಮಾಡಲಾಗಿದೆ. ಮದುವೆ, ಜಾತ್ರೆ ಎಲ್ಲದ್ದಕ್ಕೂ ಕಡಿವಾಣ ಹಾಕಿದೆ. ಜನ ಸಂದಣಿ ಸೇರುವ ಜಾಗದ ಮೇಲೆ ನಿಗಾವಹಿಸಲಾಗಿದೆ. ಆದರೆ ವಿಧಾನಸೌಧದಲ್ಲಿ ಮಾತ್ರ ಇನ್ನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ವಿಫಲವಾಗಿದೆ. ವಿಧಾನಸೌಧಕ್ಕೆ ನಿತ್ಯ ಸಾವಿರಾರು ಜನರು ಬರ್ತಾರೆ. ಸಿಬ್ಬಂದಿ ಕೆಲಸಕ್ಕೆ ಹಾಜರಾಗ್ತಾರೆ. ಆದ್ರೆ ಅವರಿಗೆಲ್ಲ ತಪಾಸಣೆ ಮಾಡೋ ಕೆಲಸ ಮಾತ್ರ ನಡೆಯುತ್ತಿಲ್ಲ. ಸದ್ಯ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ವೀಕ್ಷಣೆಗೆ ಬರೋ ಸಾರ್ವಜನಿಕರಿಗೆ ಕೊರೊನಾ ತಪಾಸಣೆ ಕೂಡಾ ಮಾಡುತ್ತಿಲ್ಲ. ಇದನ್ನೂ ಓದಿ: 162 ರಾಷ್ಟ್ರ, ಪ್ರಾಂತ್ಯಗಳಿಗೆ ಹರಡಿದ ಮಹಾಮಾರಿ ಕೊರೊನಾ – ಭಾರತದಲ್ಲಿ 114 ಮಂದಿಗೆ ಸೋಂಕು
ವಿಧಾನಸಭೆ ಸಭಾಂಗಣದಲ್ಲಿ ಅಲ್ಪಸ್ವಲ್ಪ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಆದ್ರೆ ವಿಧಾನಸೌಧದ ಹೊರಗೆ ಮಾತ್ರ ಯಾವುದೇ ಕ್ರಮಗಳನ್ನ ಆರೋಗ್ಯ ಇಲಾಖೆ ತೆಗೆದುಕೊಂಡಿಲ್ಲ. ಹೊರಗಡೆಯಿಂದ ಬರುವವರನ್ನ ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ಮಾಡೋದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಈವರೆಗೂ ವಿಧಾನಸೌಧದ 4 ದಿಕ್ಕಿಗೂ ಥರ್ಮಲ್ ಸ್ಕ್ಯಾನರ್ ಅಳವಡಿಸುವ ಕೆಲಸ ಆಗಿಲ್ಲ. ಶಾಸಕರು ಓಡಾಡುವ ಬಾಗಿಲಲ್ಲೂ ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮಾಡಿಲ್ಲ. ಹೀಗಾಗಿ ಕೊರೊನಾ ಪತ್ತೆ ಹೇಗೆ ಅನ್ನೊ ಪ್ರಶ್ನೆ ಕಾಡ್ತಿದೆ. ಇದನ್ನೂ ಓದಿ: ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ
ಇದಲ್ಲದೆ ಹೊರಗಡೆಯಿಂದ ಬರುವವರಿಗೆ ಸ್ಯಾನಿಟರೈಸರ್ ಕೂಡಾ ವ್ಯವಸ್ಥೆ ಮಾಡಿಲ್ಲ. ಮಾಸ್ಕ್ ಗಳ ಸೌಲಭ್ಯಗಳನ್ನು ಒದಗಿಸಿಲ್ಲ. ಇದನ್ನ ನೋಡಿದ್ರೆ ಸರ್ಕಾರ ಕೊರೊನಾವನ್ನ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಅಂತ ಗೊತ್ತಾಗುತ್ತೆ. ಇನ್ನು ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಯಾರು ಆತಂಕ ಪಡಬೇಡಿ ಅಂತ ಹೇಳ್ತಾರೆ. ಆದ್ರೆ ಶಕ್ತಿಸೌಧದ ಶಾಸಕರಿಗೆ ಅಗತ್ಯ ಕ್ರಮ ತೆಗೆದುಕೊಳ್ಳೊದರಲ್ಲಿ ಸರ್ಕಾರ ಎಡವಿದಂತೆ ಕಾಣಿಸುತ್ತಿದೆ. ಇದನ್ನೂ ಓದಿ: ಕಲಬುರಗಿ ವೈದ್ಯರಿಗೆ ಕೊರೊನಾ- ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ