ಮಡಿಕೇರಿ: ರಾಜ್ಯಾದ್ಯಂತ ಕೊರೊನಾ ವೈರಸ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವಂತೆ ಕೊಡಗು ಜೆಡಿಎಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ನೇತೃತ್ವದಲ್ಲಿ ಮಡಿಕೇರಿಯ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಅರ್ಚನೆ ಮಾಡಿಸಿ ಕೊರೊನಾದಿಂದ ಜನರನ್ನು ರಕ್ಷಿಸುವಂತೆ ಪ್ರಾರ್ಥಿಸಿದರು. ಬಳಿಕ ನಗರದ ಜಾಮೀಯ ಮಸೀದಿಗೆ ತೆರಳಿದ ಜೆಡಿಎಸ್ ಮುಖಂಡರು ಮಸೀದಿಯ ಮೌಲ್ವಿ ಜೊತೆ ಸೇರಿ ಪ್ರಾರ್ಥನೆ ಸಲ್ಲಿಸಿದರು.
ಈ ಮಹಾಮಾರಿಯಿಂದ ಜನರನ್ನು ರಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಕೊಡಗಿನಲ್ಲಿ ಈಗಾಗಲೇ ಕೊರೋನಾ ವೈರಸ್ ಸೋಂಕು ಶಂಕಿತರ ಸಂಖ್ಯೆ ಮೂರರಕ್ಕೆ ಏರಿದ್ದು, ಇದು ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೆ ನೂಕಿದೆ. ಹೀಗಾಗಿ ಜನರು ಕೊರೊನಾದಿಂದ ರಕ್ಷಿಸುವಂತೆ ದೇವರ ಮೊರೆ ಹೋಗಿದ್ದಾರೆ.
ವಿಶ್ವದಲ್ಲೇ ತಲ್ಲಣ ಉಂಟು ಮಾಡುತ್ತಿರುವ ಈ ಕೊರೊನಾ ವೈರಸ್ ಜನರನ್ನು ತೀವ್ರವಾಗಿ ಕಾಡುತ್ತಿದೆ. ಇದರಿಂದ ರಕ್ಷಣೆ ಪಡೆಯಲು ಮುಖ್ಯವಾಗಿ ಜನರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಿದರು.