ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ನಮ್ಮ ಕ್ಷೇತ್ರಕ್ಕೆ ಬನ್ನಿ, ಬಂದು ಸ್ಪರ್ಧೆ ಮಾಡಿ ಎಂದು ಕರೆಯುವ ಮೂಲಕ ಕಾಂಗ್ರೆಸ್ ಶಾಸಕರೇ ನಮ್ಮ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಅವರಿಗೆ ನಾನು ಮನವಿ ಮಾಡಿದ್ದೇನೆ ಎಂದು ಶಾಸಕ ಸುಬ್ಬಾರೆಡ್ಡಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ಅಪಮಾನ ಮಾಡ್ತಿದ್ದಾರೆ. ಅವರನ್ನ ಎಲ್ಲರೂ ಕ್ಷೇತ್ರಕ್ಕೆ ಬನ್ನಿ ಬನ್ನಿ ಅಂತ ಕರೆದರೆ ಅವರಿಗೆ ಕ್ಷೇತ್ರ ಗತಿ ಇಲ್ವಾ..? ಅವರು 40 ವರ್ಷ ರಾಜಕಾರಣದಲ್ಲಿದ್ದಾರೆ, ಅವರದ್ದೂ ಕ್ಷೇತ್ರವಿದೆ. ಈ ರೀತಿ ಕರೆದು ಅವರಿಗೆ ಯಾಕೆ ಅವಮಾನ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋದು ಬಿಎಸ್ವೈ ಮಾತಿನ ಅರ್ಥ: ಸಿದ್ದರಾಮಯ್ಯ
ಇದೇ ವೇಳೆ ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಾಧನ ಸಮಾವೇಶದ ಕುರಿತು ಮಾತನಾಡಿದ ಸುಧಾಕರ್, ಇದು ಸಾಧನ ಸಮಾವೇಶ ಅಲ್ಲ ಜನೋತ್ಸವ. ನಮ್ಮದು ಜನಸಾಮಾನ್ಯರ ಸರ್ಕಾರ. ಜನರ ಉತ್ಸವ ಮಾಡಲು ಹೊರಟಿದೆ. ಜನರೇ ಸ್ವಯಂಪ್ರೇರಿತರಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ನೋಡಿ ಜನೋತ್ಸವ ಯಶಸ್ವಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.