ಬೆಂಗಳೂರು: ಕಾಂಗ್ರೆಸ್ನ (Congress) ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಸುನೀಲ್ ಕನುಗೋಳು (Sunil Kanugolu) ಅವರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮುಖ್ಯ ಸಲಹೆಗಾರರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಸುನೀಲ್ ಕನುಗೋಳು ಅವರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ತಮ್ಮ ಸಲಹೆಗಾರರಾಗಿಸಿ ಸಿಎಂ ನೇಮಕ ಮಾಡಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯನವರು ಸುನೀಲ್ ಕನುಗೋಳು ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದ ಪೇಸಿಎಂ, ಸೇಸಿಎಂ ಅಭಿಯಾನ, ಉಚಿತ ಗ್ಯಾರಂಟಿಗಳ ಹಿಂದಿನ ಸೂತ್ರಧಾರಿಯೇ ಸುನೀಲ್ ಕನುಗೋಳು ಎನ್ನಲಾಗಿದೆ. ಪಕ್ಷ ಗೆಲ್ಲುವಲ್ಲಿ ತೆರೆ ಹಿಂದಿನ ತಂತ್ರಗಾರಿಕೆಯನ್ನು ಹೆಣೆದಿದ್ದರು. ಈಗ ಆಡಳಿತದಲ್ಲೂ ಸಿಎಂಗೆ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ| ಡಿಕೆಶಿ Vs ಹೆಚ್ಡಿಕೆ – ಗೆಲ್ಲೋದ್ಯಾರು?
2014ರ ಲೋಕಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಜೊತೆಗೂಡಿ ಬಿಜೆಪಿ ಪರವಾಗಿ ಸುನೀಲ್ ಕನುಗೋಳು ಕಾರ್ಯನಿರ್ವಹಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.
ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಯೋಜನೆ ಮತ್ತು ಯಶಸ್ಸಿನಲ್ಲಿ ಇವರ ತಂಡದ ಪಾತ್ರ ಮಹತ್ವದ್ದಾಗಿತ್ತು. ಕಾಂಗ್ರೆಸ್ಗೆ ಬರುವ ಮುನ್ನ 2019ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪರ ಸುನಿಲ್ ಕೆಲಸ ಮಾಡಿದ್ದರು.
