ದಾವಣಗೆರೆ: ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹಾಕುವುದು ಸರಿಯಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಆದರೆ ಗಣಪತಿ ಹಬ್ಬ ಆಚರಿಸಲು 10 ಲಕ್ಷ ಬಾಂಡ್ ಇಡಬೇಕು ಮತ್ತು ವಾದ್ಯಗೋಷ್ಠಿಗಳು ಇರಬಾರದು ಎನ್ನುವ ನಿರ್ಬಂಧಗಳನ್ನು ಹಾಕಿದ್ದಾರೆ. ಇವರು ಸರ್ವಾಧಿಕಾರಿ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.
ಹಿಂದೂ ಹಬ್ಬಗಳಿಗೆ ಮಾತ್ರ ನಿರ್ಬಂಧಗಳಿವೆ. ಆದರೆ ಮುಸ್ಲಿಂ ಹಬ್ಬಕ್ಕೆ ಯಾಕೆ ನಿರ್ಬಂಧ ಇಲ್ಲ. ಮಸೀದಿಯಲ್ಲಿ ಬೆಳಗಿನ ಜಾವ ಶಬ್ಧವನ್ನು ಏಕೆ ಹತ್ತಿಕ್ಕುತ್ತಿಲ್ಲ. ಗಣೇಶ ಹಬ್ಬದಲ್ಲಿ ಗಲಾಟೆಯಾಗದಂತೆ ಹಿಂದೂ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಗಣಪತಿ ಹಬ್ಬಕ್ಕೆ ಹಾಕಿದ ನಿರ್ಬಂಧಗಳನ್ನು ತೆಗೆಯದಿದ್ದರೆ ಇದೇ ತಿಂಗಳ 18 ರಂದು ರಾಜ್ಯಾದ್ಯಂತ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ನಟ ಉಪೇಂದ್ರ ರಾಜಕೀಯ ಪ್ರವೇಶ ವಿಚಾರ ಸ್ವಾಗತಾರ್ಹ. ಶ್ರೀರಾಮಸೇನೆ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಮೋದ್ ಮುತಾಲಿಕ್ ಭರವಸೆ ನೀಡಿದರು. ಕುಲಗೆಟ್ಟ ರಾಜಕಾರಣವನ್ನ ಸರಿ ಮಾಡಲು ಉಪೇಂದ್ರ ಅವರು ರಾಜಕಾರಣಕ್ಕೆ ಬರಬೇಕು. ಸ್ವಾರ್ಥ, ಗೂಂಡಾಗಿರಿ, ಜಾತಿ ತುಂಬಿಕೊಂಡಿರುವ ಈ ರಾಜಕಾರಣವನ್ನ ಸರಿಮಾಡಲು ಹೊಸಬರು ಬರಲಿ ಎಂದು ಹೇಳಿದರು.
ಉಪೇಂದ್ರ ಅವರ ನಿಲುವುಗಳು ಉತ್ಕೃಷ್ಟವಾಗಿದ್ದು ಹೊಸ ನಾಯಕರನ್ನು ಹುಟ್ಟು ಹಾಕಲಿ. ಇದಕ್ಕೆ ನಮ್ಮ ಬೆಂಬಲ ಇದೆ ಎಂದರು.