ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ದಳಪತಿಗೆ ಕಾಂಗ್ರೆಸ್ ಬೆಂಬಲ

2 Min Read

ಚೆನ್ನೈ: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮಾಡಲು ದಳಪತಿ ವಿಜಯ್‌ (Thalapathy vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಬೆಂಬಲ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಪಕ್ಷದ ಉನ್ನತ ಮೂಲಗಳ ಪ್ರಕಾರ, ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ (Perunthalaivar Kamaraj) ನೇತೃತ್ವದಲ್ಲಿ ಶಾಸಕರು ಮತ್ತು ಹೈಕಮಾಂಡ್ ಜೊತೆಗೆ ಮಂಗಳವಾರ ರಾತ್ರಿ ನಡೆದ ಸುಧೀರ್ಘ ಸಭೆಯ ಬಳಿಕ ಟಿವಿಕೆ ಬೆಂಬಲಿಸಲು ನಿರ್ಧರಿಸಲಾಗಿದೆ.

ಇದರಿಂದ ಟಿವಿಕೆಗೆ ಐವರು ಕಾಂಗ್ರೆಸ್‌ ಶಾಸಕರ ಬೆಂಬಲ ಸಿಕ್ಕಿದಂತಾಗಿದೆ. ಬಹುಮತ ಸಾಬೀತುಪಡಿಸಲು ಟಿವಿಕೆಗೆ ಇನ್ನೂ 5 ಸ್ಥಾನಗಳ ಅಗತ್ಯವಿದ್ದು, ಇಂದು ಸಂಜೆ ವೇಳೆ ನಿರ್ಧಾರವಾಗಲಿದೆ.

ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌, ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ ಎಂದು ತಿಳಿಸಿದ್ದರು.

ಅತಿದೊಡ್ಡ ಪಕ್ಷವಾದ ಟಿವಿಕೆ
ಸಿನಿಮಾ ರಂಗಕ್ಕೆ ಗುಡ್‌ಬೈ ಹೇಳಿ ರಾಜಕೀಯಕ್ಕೆ ಧುಮುಕಿದ ವಿಜಯ್‌ ದಳಪತಿ ಚೊಚ್ಚಲ ಪ್ರಯತ್ನದಲ್ಲೇ ಸಕ್ಸಸ್‌ ಕಂಡಿದ್ದು, ಸಿಎಂ ಹುದ್ದೆಗೇರುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡಿನ 234 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನ ಗಳಿಸಿದೆ. ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್‌ನ 5 ಶಾಸಕರ ಬಲ ಸಿಕ್ಕಿದ್ದು, ಇನ್ನೂ 5 ಸ್ಥಾನಗಳು ಬಹುಮತಕ್ಕೆ ಅಗತ್ಯವಿದೆ.

ಇನ್ನೂ ಪ್ರಬಲ ಶಕ್ತಿಯಾಗಿದ್ದ ದ್ರಾವಿಡ ಮುನ್ನೇತ್ರ ಕಳಗಂ (DMK) 59 ಸ್ಥಾನಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) 47 ಸ್ಥಾನಗಳೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.

Share This Article