ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಣಿ ಸರಗಳ್ಳತನ ಹಾಗೂ ಪುಡಿ ರೌಡಿಗಳ ಹಾವಳಿಯಿಂದ ರಾಜಧಾನಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ಎಂಟು ವಿಭಾಗೀಯ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಆಕ್ಟಿವ್ ಆಗಿರುವ ಅಪರಾಧ ಹಿನ್ನೆಲೆ ಹೊಂದಿರುವವರ ಪಟ್ಟಿ(ಎಂಒಬಿ)ಯಲ್ಲಿರುವರ ಮೇಲೆ ಹದ್ದಿನ ಕಣ್ಣಿಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದಾರೆ. ಆಯುಕ್ತರ ಆದೇಶ ಮೇರೆಗೆ ಬೆಂಗಳೂರು ಸೂಪರ್ ಕಾಪ್ ಮೈಗೊಡವಿ ನಿಂತಿದ್ದು, ಬೆಳ್ಳಂಬೆಳಗ್ಗೆ ಎಂಒಬಿಗಳ ಮನೆ ಮೇಲೆ ಡಿಸಿಪಿಗಳು ದಾಳಿ ಮಾಡಿದ್ದಾರೆ. ಪೊಲೀಸರು ನಗರದ ಎಂಟು ವಿಭಾಗಗಳಲ್ಲಿರುವ ಎಂಒಬಿಗಳ ಚಳಿ ಬಿಡಿಸಿದ್ದಾರೆ. ಇದೇ ವೇಳೆ ಆಕ್ಟಿವ್ ಆಗಿರುವ ಎಂಒಬಿಗಳಿಗೆ ಎಚ್ಚರಿಕೆ ನೀಡಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ಕಾಗಿ ಸೂಚಿಸಿದ್ದಾರೆ.
ತಮ್ಮ ಠಾಣೆ ವ್ಯಾಪ್ತಿಯಲ್ಲಿರುವ ಎಂಒಬಿಗಳನ್ನು ಪಟ್ಟಿ ಮಾಡಿ ಎಲ್ಲರ ಮನೆ ಮೆಲೂ ದಾಳಿ ನಡೆಸಿದ್ದು, ಆಕ್ಟಿವ್ ಇರುವ ಎಂಒಬಿಗಳ ಪ್ರತ್ಯೇಕ ಪಟ್ಟಿ ತಯಾರಿಸಿದ್ದಾರೆ. ಆಕ್ಟಿವ್ ಆಗಿರುವ ಎಂಒಬಿಗಳ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇವರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೆ, ನಗರದಲ್ಲಿ ಎಲ್ಲೇ ಸರಗಳ್ಳತನದಂತಹ ಪ್ರಕರಣಗಳೂ ನಡೆದರೂ ಬೇಗನೆ ಪತ್ತೆಹಚ್ಚು ರೀತಿಯಲ್ಲಿ ವ್ಯವಸ್ಥಿತವಾಗಿ ತಮ್ಮ ಠಾಣೆ ವ್ಯಾಪ್ತಿಯ ಎಂಒಬಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.