ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಳಿವಿನ ಅಂಚಿನಲ್ಲಿರುವ ಚಿಪ್ಪುಹಂದಿ ಕಾಣಿಸಿಕೊಂಡಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳಪುರದ ಜಮೀನಿನಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ. ಹಂಗಳಪುರ ಗ್ರಾಮದ ಜಮೀನೊಂದರ ಟೊಮೆಟೊ ಬೆಳೆಗೆ ಹಾಕಲಾಗಿದ್ದ ಬಲೆಗೆ ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು.
ಈ ವೇಳೆ ಅರಣ್ಯ ಇಲಾಖೆ ಮಾಹಿತಿ ಪಡೆದು ಸ್ಥಳಕ್ಕೆ ಬಂದು ಚಿಪ್ಪುಹಂದಿಯನ್ನು ರಕ್ಷಿಸಿ ಓಂಕಾರ್ ಅರಣ್ಯ ವಲಯಕ್ಕೆ ಬಿಟ್ಟಿದ್ದಾರೆ. ಪ್ರಾಣಿಗಳನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರಾಪ್ ಸೇರಿದಂತೆ ಇನ್ನಿತರ ಸಮೀಕ್ಷೆ ನಡೆಸಿದಾಗಲೂ ಚಿಪ್ಪುಹಂದಿ ಇರುವುದು ಪತ್ತೆಯಾಗಿರಲಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಬಲೆಗೆ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು. ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ. ಹುಳ-ಹುಪ್ಪಟೆ, ಕೀಟಗಳನ್ನು ತಿಂದು ಬದುಕುವ ಈ ನಿಶಾಚಾರಿ ಪ್ರಾಣಿ ಬೇಟೆಗಾರರ ಕೆಂಗಣ್ಣಿಗೆ ಗುರಿಯಾಗಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯಾಧಿಕಾರಿ ಹೇಳಿದರು.