ಚಿಕ್ಕಮಗಳೂರು: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮಹಾಮಾರಿ ಕೊರೊನ ಸೋಂಕಿತರ ಸಂಖ್ಯೆ ಹಾಗೂ ಶಂಕಿತರ ಸಂಖ್ಯೆ ಬೆಳೆಯುತ್ತಲೇ ಇದೆ. ಸರ್ಕಾರ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಜನರಿಗೆ ಬುದ್ಧಿ ಬರುತ್ತಿಲ್ಲ. ಮಾಡಬೇಡಿ ಅಂದಿದ್ದನ್ನೇ ಜಾಸ್ತಿ ಮಾಡುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಗುಂಪು ಸೇರಬೇಡಿ ಎಂದು ಜಿಲ್ಲಾಡಳಿತ, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಎಷ್ಟೇ ಮನವಿ ಮಾಡಿದರು ಜನ ಮತ್ತದ್ದನ್ನೇ ಮಾಡುತ್ತಿದ್ದಾರೆ. ಇಂದು ಕೂಡ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ತೋಟದ ಮನೆಯಲ್ಲಿ ಪೂಜೆ ಮಾಡಿ ನಾನ್ವೆಜ್ ಅಡುಗೆ ಮಾಡಿ ಪಾರ್ಟಿ ಮಾಡುತ್ತಿದ್ದವರನ್ನು ಎನ್.ಆರ್.ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ, 14 ಹೆಂಗಸರು ಹಾಗೂ ಇಬ್ಬರು ಗಂಡಸರು ತೋಟದ ಮನೆಯಲ್ಲಿ ಪೂಜೆ ಮಾಡಿ ಅಡುಗೆ ಮಾಡಿದ್ದಾರೆ. ಕರ್ಫ್ಯೂ ಮಾದರಿಯ 144 ಸೆಕ್ಷನ್ ಲಾಕ್ಡೌನ್ ಜಾರಿ ಇದ್ದರೂ ಗುಂಪು ಸೇರಿದ ಆರೋಪದಡಿ 16 ಜನರನ್ನೂ ಬಂಧಿಸಿರೋ ಪೊಲೀಸರು ಎಲ್ಲರ ವಿರುದ್ಧ ದೂರು ದಾಖಲಿಸಿ, ವೈದ್ಯರ ಬಳಿ ಪರೀಕ್ಷೆಗೊಳಪಡಿಸಿದ್ದಾರೆ. ಬಳಿಕ ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಯ ಆವರಣದ ಕೊರೊನ ವಿಶೇಷ ಚಿಕಿತ್ಸಾ ಘಟಕಕ್ಕೆ ಬಿಟ್ಟಿದ್ದು ಊಟ-ವಸತಿ ಸೌಲಭ್ಯ ಕಲ್ಪಿಸಿದ್ದಾರೆ.