ಚಿಕ್ಕಮಗಳೂರು: ನಾವು ಹಗಲು ಕನಸು ಕಾಣೋ ಜನ ಅಲ್ಲ. ನಾವು ಕನಸು ನನಸು ಮಾಡುವ ಜನ. ಸಿಎಂ ಅವರು ಸಾಂದರ್ಭಿಕ ಶಿಶು. ಹಾಗಾಗಿ ಅವರಿಗೆ ಕನಸು ಬೀಳುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಶಾಸಕ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಮ್ಮಿಶ್ರ ಸರ್ಕಾರ ಬೀಳಿಸುವ ಹಗಲುಗನಸು ಕಾಣುತ್ತಿದೆ ಎಂಬ ಮುಖ್ಯಮಂತ್ರಿಗಳ ಟ್ವೀಟ್ ಗೆ ತಿರುಗೇಟು ನೀಡಿದರು. ನಾವು ಸರ್ಕಾರ ಬೀಳಿಸುವ ನಿಟ್ಟಿನಲ್ಲಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಬೀಳಿಸುವುದು ನಮ್ಮ ಕೆಲಸ ಅಲ್ಲ. ಸರ್ಕಾರ ಉಳಿಸಿಕೊಳ್ಳುವುದು ಅವರ ಕೆಲಸವಾಗಿದೆ. ಸರ್ಕಾರ ಯಾವಾಗ ಬೀಳುತ್ತದೆ ಎಂದು ನಾವು ಕಾಯುತ್ತಾ ಇದ್ದೇವೆ ಅಷ್ಟೇ ಎಂದು ಹೇಳಿದರು.
ಇದೇ ವೇಳೆ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿದ್ದನ್ನ ಆನಂದ್ಸಿಂಗ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರಬಹುದು. ಅಥವಾ ರಾಜಕೀಯ ಕಾರಣವೂ ಇರಬಹುದು ನನಗೆ ಮಾಹಿತಿ ಇಲ್ಲ ಎಂದರು.
ಈಗ ಕಾಂಗ್ರೆಸ್ ಹತಾಷೆಯಲ್ಲಿದೆ. ಕಾಂಗ್ರೆಸ್ ನಲ್ಲಿ ಭವಿಷ್ಯ ಇಲ್ಲ ಅನಿಸಿದ್ರೆ ಅದು ಅವರ ತೀರ್ಮಾನವಾಗುತ್ತದೆ. ರಾಷ್ಟ್ರೀಯ ನಾಯಕರೇ ಯಾವುದೇ ಭವಿಷ್ಯ ಇಲ್ಲದೇ ಹತಾಷೆಯಲ್ಲಿದ್ದಾರೆ. ಹಾಗಾಗಿ ಬೇರೆ ನಾಯಕರಿಗೂ ಇಲ್ಲಿದ್ದರೆ ಉದ್ಧಾರ ಆಗಲ್ಲ ಎಂದು ಅನಿಸಿರಬಹುದು. ಹಾಗಾಗಿ ರಾಜೀನಾಮೆ ನೀಡುತ್ತಿರಬಹುದು ಎಂದು ಅವರು ತಿಳಿಸಿದರು.
ಅಮೇರಿಕದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ.
ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ #BJP ಯ ಪ್ರಯತ್ನ 'ನಿರಂತರ ಹಗಲುಗನಸು'
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 1, 2019
ಸಿಎಂ ಟ್ವೀಟ್ ನಲ್ಲೇನಿತ್ತು?
ಅಮೇರಿಕದ ನ್ಯೂಜೆರ್ಸಿಯಲ್ಲಿರುವ ಸಿಎಂ ಅವರು ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಟ್ವೀಟ್ ಮಾಡಿ, ಅಮೇರಿಕದ ನ್ಯೂಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ವಿದ್ಯಮಾನವನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.