ಚಿಕ್ಕಬಳ್ಳಾಪುರ: ಆಮರಣಾಂತ ಉಪವಾಸ ಸತ್ಯಾಗ್ರಹಕ್ಕಿಳಿದ ರೈತರೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ ಅವರ ತವರು ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಭಾದಮರಳೂರು ಗ್ರಾಮದ ರೈತ ನಾರಾಯಣಪ್ಪ ಸತ್ಯಾಗ್ರಹದಲ್ಲಿ ಆಯಾಸಗೊಂಡು ಪ್ರಜ್ಞೆ ತಪ್ಪಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ಪೊಲೀಸರು ಸ್ಥಳದಲ್ಲಿಯೇ ಇದ್ದ ಅಂಬುಲೆನ್ಸ್ ಮೂಲಕ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕು ಕಚೇರಿ ಎದುರು ನಿನ್ನೆಯಿಂದ ಪವರ್ ಗ್ರಿಡ್ ಭಾದಿತ ರೈತರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದ ರೈತರು ನಿನ್ನೆ ರಾತ್ರಿ ಹಾಡು, ಭಜನೆ, ಭಕ್ತಿಗೀತೆಗಳ ಮೂಲಕ ಪ್ರತಿಭಟಿಸಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೊರೇಷನ್ ನಡೆಸುತ್ತಿರುವ ದೇವನಹಳ್ಳಿ-ಪಾವಗಡ ಮಾರ್ಗದ ಹೈಟೆನ್ಷನ್ ವಿದ್ಯುತ್ ಪ್ರಸರಣಾ ಮಾರ್ಗದ ಕಾರಿಡಾರ್ ಕಾಮಗಾರಿಗೆ ರೈತರು ಜಮೀನು ಕಳೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಜಮೀನಿಗೆ ಸೂಕ್ತ ಬೆಲೆ ನೀಡುತ್ತಿಲ್ಲ. ಹೀಗಾಗಿ ರಾಜ್ಯದ ಕೆಪಿಟಿಸಿಎಲ್ ಮಾದರಿಯಲ್ಲೇ ಪರಿಹಾರ ವಿತರಣೆ ಆಗಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಸೂಕ್ತ ಪರಿಹಾರಕ್ಕಾಗಿ ರೈತರು ಹಾಗೂ ಜಿಲ್ಲಾಡಳಿತದ ನಡುವೆ ಎರಡು-ಮೂರು ತಿಂಗಳುಗಳಿಂದ ‘ನಾ ಕೊಡೆ, ನೀ ಬಿಡೆ’ ಎನ್ನುವಂತೆ ಪ್ರತಿಭಟನೆ, ಧರಣಿ ಹಾಗೂ ಹೋರಾಟ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv