ಚಾಮರಾಜನಗರ: ನೇಪಾಳದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.
ಕೊಳ್ಳೇಗಾಲದ ಓಂ ಶಕ್ತಿ ದೇವಸ್ಥಾನದ ರಸ್ತೆಯ ಚಿಲ್ಲರೆ ಅಂಗಡಿಯೊಂದರ ಬಳಿ ಘಟನೆ ನಡೆದಿದ್ದು, ಅತಿನ್ ಖಡ್ಕ (28) ಎಂಬಾತ ನೇಣಿಗೆ ಶರಣಾಗಿರುವ ನೇಪಾಳಿ ಯುವಕ. ಮೃತ ಯುವಕನ ಬಟ್ಟೆಯಲ್ಲಿ ದೊರೆತ ಪಾಸ್ ಪೋರ್ಟ್ನಿಂದ ಹೆಸರು ವಿಳಾಸ ತಿಳಿದು ಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಚಿಲ್ಲರೆ ಅಂಗಡಿಯೊಂದರ ಮುಂಭಾಗದ ಸಜ್ಜೆಗೆ ಅಳವಡಿಸಲಾಗಿದ್ದ ಕಬ್ಬಿಣದ ಕೊಕ್ಕೆಗೆ ಪ್ಲಾಸ್ಟಿಕ್ ವೈರ್ನಿಂದ ನೇಣು ಬಿಗಿದುಕೊಂಡಿದ್ದಾನೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಅಕಸ್ಮಿಕವಾಗಿ ಹೊರ ಬಂದ ಸ್ಥಳೀಯ ನಿವಾಸಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಪರಿಶೀಲಿಸಿ, ಮೃತನ ವಾರಸುದಾರರ ಪತ್ತೆಗಾಗಿ ಒಡೆಯರಪಾಳ್ಯ ಟಿಬೆಟ್ ಕ್ಯಾಂಪ್ಗೆ ಮಾಹಿತಿ ನೀಡಿದ್ದರೆ. ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಇರಿಸಲಾಗಿದೆ.