ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ಗುರುದೇಶಪಾಂಡೆ ನಿರ್ದೇಶನದ ಈ ಸಿನಿಮಾ ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿದೆ. ಹೊಸ ಹುಡುಗನ ಚಿತ್ರವೊಂದನ್ನು ಈ ಪರಿಯಾಗಿ ಅದ್ಧೂರಿತನದೊಂದಿಗೆ ರೂಪಿಸಿರೋ ಪರಿ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಸಿನಿಮಾ ರಂಗದಲ್ಲಿಯೇ ಪಡ್ಡೆಹುಲಿ ನಾಯಕ ಶ್ರೇಯಸ್ ಮೊದಲ ಸಿನಿಮಾಗಾಗಿ ರೆಡಿಯಾಗಿರೋ ರೀತಿಯ ಬಗ್ಗೆ ಬೆರಗು ಹರಡಿಕೊಂಡಿದೆ. ಹಾಗಿದ್ದ ಮೇಲೆ ಯಾರೇ ಹೊಸಬರು ಸಿನಿಮಾ ಮಾಡಿದರೂ ಅದನ್ನು ಗಮನಿಸುತ್ತಾ ಬೆನ್ತಟ್ಟುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಬಗ್ಗೆ ಮಾತಾಡದಿರಲು ಸಾಧ್ಯವೇ?
ಪಡ್ಡೆಹುಲಿಯಾಗಿ ಮಿಂಚಲು ಸಜ್ಜಾಗಿರೋ ಶ್ರೇಯಸ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡಿ ಹೊಗಳಿದ್ದಾರೆ. ನಾಯಕನಾಗಬೇಕನ್ನೋ ಕನಸು ಮಾಮೂಲು. ಒಂದಷ್ಟು ಮಂದಿ ನಾಯಕರಾಗಿ ಅಡಿಯಿರಿಸುತ್ತಾರೆ. ಆದರೆ ಅದಕ್ಕೊಂದು ಪೂರ್ವ ತಯಾರಿ, ಕಠಿಣ ಪರಿಶ್ರಮ ಬೇಕೇ ಬೇಕೆಂಬುದು ಅನೇಕರಿಗೆ ಗೊತ್ತಿರೋದಿಲ್ಲ. ಆದರೆ ಶ್ರೇಯಸ್ ಮೊದಲ ಸಿನಿಮಾಗೆ ಹೇಗೆಲ್ಲ ತಯಾರಾಗಬೇಕೆಂಬುದಕ್ಕೆ ಮಾದರಿಯಂತಿದ್ದಾರೆಂದು ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ವಿಷ್ಣು ಅಭಿಮಾನಿಗಳ ಜೊತೆಗೆ ದರ್ಶನ್ ಅಭಿಮಾನಿಗಳೂ ಕೂಡಾ ಪಡ್ಡೆಹುಲಿ ಚಿತ್ರದತ್ತ ಚಿತ್ತ ನೆಟ್ಟಿದ್ದಾರೆ. ಇದರಿಂದಾಗಿಯೇ ಪಡ್ಡೆಹುಲಿಯ ಗೆಲುವು ಮತ್ತಷ್ಟು ನಿಚ್ಚಳವಾದಂತಾಗಿದೆ.