ಬೆಂಗಳೂರು: ಕಾವೇರಿ ಪ್ರಾಧಿಕಾರದ ಆದೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್ (Supreme Court) ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಹೀಗಾಗಿ ತಮಿಳುನಾಡಿಗೆ (Tamil Nadu) 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲೇಬೇಕಾದ ಸಂಕಷ್ಟ ಸ್ಥಿತಿಗೆ ಕರ್ನಾಟಕ (Karnataka) ಸರ್ಕಾರ ತಲುಪಿದೆ.
ನಾವು ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಪ್ರತಿ 15 ದಿನಗಳಿಗೊಮ್ಮೆ ಇದರ ಮೇಲೆ ನಿಗಾ ಇಡುತ್ತೇವೆ. ಪ್ರಾಧಿಕಾರಗಳು 2 ವಾರಕ್ಕೊಮ್ಮೆ ಸಭೆಗಳನ್ನು ನಡೆಸಲಿದೆ. ಕರ್ನಾಟಕ, ತಮಿಳುನಾಡು ವಾದವನ್ನು ನಾವು ಒಪ್ಪುವುದಿಲ್ಲ ಎಂದು ಸುಪ್ರೀಂ ಹೇಳಿದೆ.
- Advertisement 2
- Advertisement 3
ಕಾವೇರಿ ಬಿಕ್ಕಟ್ಟು ಮುಂದೇನು?
ಸುಪ್ರೀಂಕೋರ್ಟ್ ಬಾಗಿಲು ಹೆಚ್ಚು ಕಡಿಮೆ ಬಂದ್ ಆಗಿದ್ದು ಮತ್ತೆ ಕಾವೇರಿ ಪ್ರಾಧಿಕಾರದ ಮುಂದೆ ಹೋಗಬಹುದು. ರಾಜ್ಯ ಸರ್ಕಾರದ ಬಳಿ ಬೇರೆ ಯಾವುದೇ ಆಯ್ಕೆಗಳು ಉಳಿಯದ ಕಾರಣ ಕೇಂದ್ರ ಸರ್ಕಾರವೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕಾದಿತು. ಎರಡು ರಾಜ್ಯಗಳನ್ನು ಕೂರಿಸಿಕೊಂಡು ಕೇಂದ್ರ ಸಭೆ ನಡೆಸಿ ಮಾನವೀಯ ನೆಲೆಗಟ್ಟಿನಲ್ಲಿ ವಿವಾದ ಬಗೆಹರಿಸಬೇಕಿದೆ. ಸಂಕಷ್ಟ ಸೂತ್ರ ರಚನೆಯಾದಲ್ಲಿ ಮಾತ್ರ ಕರ್ನಾಟಕಕ್ಕೆ ಉಳಿಗಾಲವಿದೆ.
- Advertisement 4
ನೀರನ್ನು ಹರಿಸದಿದ್ದರೆ ಏನಾಗುತ್ತೆ?
ತಮಿಳುನಾಡಿಗೆ ನೀರು ಹರಿಸದಿದ್ರೆ ಸರ್ಕಾರ ಮೇಲೆ ನ್ಯಾಯಾಂಗ ನಿಂದನೆಯ ತೂಗುಗತ್ತಿ ಬೀಳುತ್ತದೆ. ಸಮಸ್ಯೆ ಮಿತಿ ಮೀರಿದ್ರೆ ಡ್ಯಾಂ ನಿಯಂತ್ರಣವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಸುಪ್ರೀಂ ವಹಿಸಬಹುದು. ಇದರಿಂದ ಆಣೆಕಟ್ಟು ಮೇಲಿನ ಅಧಿಕಾರ, ನಿಯಂತ್ರಣ ಎರಡನ್ನು ಸರ್ಕಾರ ಕಳೆದುಕೊಳ್ಳಲಿದೆ. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಂಧನವೂ ಆಗಬಹುದು. ಇನ್ನೂ ಅತಿಯಾದ ಹಂತದಲ್ಲಿ ಸರ್ಕಾರವನ್ನು ವಜಾ ಮಾಡಲು ಸುಪ್ರಿಂ ಯೋಚಿಸಬಹುದು. ಇದನ್ನೂ ಓದಿ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು – ಸುಪ್ರೀಂನಲ್ಲಿ ಇಂದು ಏನಾಯ್ತು? ವಾದ ಏನಿತ್ತು?
ತಮಿಳುನಾಡಿಗೆ ಹೀಗೆಯೇ ನೀರು ಹರಿದರೆ ಮುಂದೇನು?
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರ ಶುರುವಾಗಬಹುದು. ಮುಂದೆ ವಾರಕೊಮ್ಮೆ ಕುಡಿಯುವ ನೀರು ಬಿಡುವ ಸ್ಥಿತಿ ನಿರ್ಮಾಣವಾದರೂ ಆಗಬಹುದು. ಒಂದು ಹಂತದ ಬಳಿಕ ಅದಕ್ಕೂ ತೊಂದರೆಯಾಗುವ ಸಾಧ್ಯತೆ ಇದ್ದು ಬೆಂಗಳೂರು ಮಾತ್ರವಲ್ಲ ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಕ್ಕೂ ತೊಂದರೆಯಾಗಬಹುದು.
Web Stories