ಚಿತ್ರದುರ್ಗ: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಿತ್ರದುರ್ಗ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೇರಳದ ಮಲಂಪುರದ ಬಳಿ ನಡೆದಿದೆ.
ಹಿರಿಯೂರು ನಗರಸಭೆ ಸದಸ್ಯ ಎ.ಪಾಂಡುರಂಗ (37) ಹಾಗೂ ಐಮಂಗಲ ಹೋಬಳಿಯ ಜೆಡಿಎಸ್ ಮುಖಂಡ ಪ್ರಭಾಕರ್ (52) ಮೃತ ದುರ್ದೈವಿಗಳು.
ಎ.ಪಾಂಡುರಂಗ ಮತ್ತು ಪ್ರಭಾಕರ್ ಕಳೆದ ಭಾನುವಾರ ಪ್ರವಾಸಕ್ಕೆಂದು ಕೇರಳಕ್ಕೆ ತೆರಳಿದ್ದರು. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಮಂಗಳವಾರ ರಾತ್ರಿ ವಾಪಸ್ ಹಿಂದಿರುಗುತ್ತಿದ್ದಾಗ ಈ ನಡೆದಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ತೆರಳುವುದಾಗಿ ತಿಳಿಸಿದ್ದಾರೆ.
ಹಿರಿಯೂರಿನ ಜೆಡಿಎಸ್ ತಾಲೂಕು ಘಟಕದಲ್ಲಿ ಪ್ರಭಾವಿ ಎನಿಸಿದ್ದ ಎ. ಪಾಂಡುರಂಗ, ಹಿರಿಯೂರು ನಗರಸಭೆಯ 7ನೇ ವಾರ್ಡ್ ಗೆ ಅವಿರೋಧವಾಗಿ ಜೆಡಿಎಸ್ನಿಂದ ಆಯ್ಕೆಯಾಗಿದ್ದರು. ಐಮಂಗಲ ಹೋಬಳಿಯ ಪ್ರಭಾಕರ್ ಕೂಡ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಪ್ರೀತಿ ಗಳಿಸಿ, ಉದಯೋನ್ಮುಖ ಜನನಾಯಕರಾಗಿ ಬೆಳೆಯುತಿದ್ದರು. ಅಲ್ಲದೇ ಇಬ್ಬರು ಕೂಡ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.