ಗದಗ: ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಊರಿಗೆ ಹೋಗಿದ್ದ ವೇಳೆ ಮೇಲ್ಛಾವಣಿಯ ಹಂಚು ಮುರಿದು ಒಳಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ನಗದು ಕದ್ದು (Theft) ಪರಾರಿಯಾಗಿರುವ ಘಟನೆ ನರಗುಂದ (Naragunda) ಪಟ್ಟಣದ ಹಾಲಕೇರಿ ಬಡಾವಣೆಯಲ್ಲಿ ನಡೆದಿದೆ.
ಸುರೇಖಾ ಬಂಡಿವಡ್ಡರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಕುಟುಂಬಸ್ಥರು ಎರಡು ದಿನಗಳ ಕಾಲ ಸಂಬಂಧಿಕರ ಊರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮೇಲ್ಛಾವಣಿಯ ಹಂಚು ಮುರಿದು ಮನೆಯೊಳಗೆ ನುಗ್ಗಿದ್ದಾರೆ.
ಮನೆಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ನಗದು, 10 ಗ್ರಾಂ ಚಿನ್ನದ ಓಲೆ ಹಾಗೂ ಮೂಗುಬೊಟ್ಟು ಕಳ್ಳತನ ಮಾಡಿದ್ದಾರೆ. ಕುಟುಂಬಸ್ಥರು ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಚಂಪತ್ ರಾಯ್ಗೆ ಎಸ್ಐಟಿ ಕ್ಲೀನ್ಚಿಟ್
ಇನ್ನೊಂದು ಕಡೆ, ಈ ಕುಟುಂಬದ ಪರಿಸ್ಥಿತಿಯೂ ಮನಕಲಕುವಂತಿದೆ. ಮಳೆ ಬಂದಾಗಲೆಲ್ಲಾ ಮನೆ ಸೋರುತ್ತಿತ್ತು. ಮನೆ ರಿಪೇರಿ ಮಾಡಿಸಬೇಕು ಎಂದು ಸುರೇಖಾ ಸ್ವಸಹಾಯ ಸಂಘದಲ್ಲಿ ಸಾಲ ಮಾಡಿಕೊಂಡಿದ್ದರು. ಇದೀಗ ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಹಾಗೂ ಬಂಗಾರದ ಆಭರಣಗಳೇ ಕಳ್ಳರ ಪಾಲಾಗಿವೆ. ಕಳ್ಳತನದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮನೆ ರಿಪೇರಿಗಾಗಿ ಸಾಲ ಮಾಡಿಕೊಂಡಿದ್ದ ಕುಟುಂಬಕ್ಕೆ ಈ ಕಳ್ಳತನ ಮತ್ತಷ್ಟು ಸಂಕಷ್ಟ ತಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.ಇದನ್ನೂ ಓದಿ: ಹಿಮಾಚಲದಲ್ಲಿ IAS, IPS, IFS ಹುದ್ದೆಗಳ ಕಡಿತಕ್ಕೆ ರಾಜ್ಯ ಸರ್ಕಾರ ನಿರ್ಧಾರ

