ಮಂಗಳೂರು: ಸೌದಿ ಅರೇಬಿಯಾದ ತಬೂಕ್ ಸಮೀಪ ಹಕಲ್ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಲ್ಮರ ಮೂಲದ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.
ಈ ಹಿಂದೆ ಪುತ್ತೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ಸಾಲ್ಮರದ ಅಬ್ದುಲ್ ರಹಿಮಾನ್ ಎಂಬವರ ಪುತ್ರ ವಝೀರ್ ಅಹ್ಮದ್(31) ಮತ್ತು ಅವರ ಸಹೋದರಿ ಕಮರುನ್ನೀಶ(35) ಮತ್ತು ವಝೀರ್ ಅಹ್ಮದ್ ಅವರು 8 ತಿಂಗಳ ಮಗು ನಿಹಾನ್ ದಾರುಣವಾಗಿ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಅವರ ಬಾವ ಜಬ್ಬಾರ್(42) ಗಂಭೀರವಾಗಿ ಗಾಯಗೊಂಡಿದ್ದಾರೆ.
ವಝೀರ್ ಅವರು ಚಲಾಯಿಸುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರಿನ ಟಯರ್ ಸ್ಪೋಟಗೊಂಡು ಕಾರು ರಸ್ತೆಯಿಂದ ಹೊರಕ್ಕೆಸೆಯಲ್ಪಟ್ಟು ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಅವರ ಪತ್ನಿ ಮತ್ತು ಸಂಬಂಧಿ ಶರೀಫ್ ನೀರ್ಕಜೆ ಮತ್ತು ಜಬ್ಬಾರ್ ಅವರ ಮೂರು ಮಕ್ಕಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ವಝೀರ್ ಅವರು ಜುಬೈಲ್ನ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ವೃತ್ತಿಯನ್ನು ಮಾಡುತ್ತಿದ್ದರು. ಅವರು ಕುಟುಂಬ ಸಮೇತ ಉಮ್ರಾ ಮತ್ತು ಮದೀನಾ ಯಾತ್ರೆ ಮುಗಿಸಿ ತಬೂಕ್ನ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಲು ತೆರಳುತ್ತಿದ್ದರು.