ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸ್ವಲ್ಪ ತಡವಾದರೂ ಈ ದೃಢ ನಿರ್ಧಾರ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ. ಪ್ರತಿಷ್ಠೆ ಬದಿಗಿಟ್ಟುರೈತರ ಹೋರಾಟ ನೋಡಿದ ಮೇಲೆ ನರೇಂದ್ರ ಮೋದಿಯವರು ಮೂರು ಕಾಯ್ದೆ ಹಿಂಪಡೆದಿದ್ದು, ದೇಶದಲ್ಲಿ ರೈತರ ವಿಶ್ವಾಸ, ಗೌರವ ಹೆಚ್ಚಾಗಿದೆ. ರೈತ ಸಮುದಾಯಕ್ಕೆ ಬಹಳ ಒಳ್ಳೆಯದಾಗುತ್ತೆ. 11ತಿಂಗಳ ಸತ್ಯಾಗ್ರಹ ನಡೆಸಿಕೊಂಡು ಬಂದಿದ್ದಾರೆ. ತಡವಾದರೂ ಅದರ ಸತ್ಯಾಂಶ ನೋಡಿಕೊಂಡು ಪ್ರಧಾನಿಯವರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
ರೈತರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಆಗಿನ ಸಂದರ್ಭದ ಘಟನಾವಳಿಗಳು ಅದು ನಿಮಗೂ ಗೊತ್ತು ನಮಗೂ ಗೊತ್ತು ಕಾರಣ ನಾನು ಹೇಳೋಕೆ ಹೋಗಲ್ಲ. ಮುಂದಿನ ಚುನಾವಣೆ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಹಿನ್ನೆಲೆ ಕೃಷಿ ಕಾಯ್ದೆ ಹಿಂಪಡೆಯಲಾಗಿದೆ ಎನ್ನುವ ವಿಚಾರವನ್ನು ಅಲ್ಲಗಳೆದ ಯಡಿಯೂರಪ್ಪ, ಇನ್ನೂ 20ವರ್ಷವಾದರೂ ಬಿಜೆಪಿ ಬಿಟ್ಟು ಯಾರು ಗೆಲ್ಲೋದಕ್ಕೆ ಆಗೋಲ್ಲ. ನರೇಂದ್ರ ಮೋದಿಯವರನ್ನು ವಿಶ್ವದ ನಾಯಕರೇ ಕೊಂಡಾಡುತ್ತಿದ್ದಾರೆ. ಮೋದಿಜಿ ವಿಶ್ವದ ನಾಯಕರೆಂದು ಪರಿಗಣಿಸಿದ್ದಾರೆ ಎಂದು ಹೇಳುತ್ತಾ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮೋದಿಯವರ ಹೆಸರೆ ಸಾಕು ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಬಹುಮತ ಪಡೆಯುತ್ತಾರೆ. ಜನ ಸ್ವರಾಜ್ ಸಮಾವೇಶ ಮುಗಿದ ಬಳಿಕ ನಾನು ಮತ್ತೊಮ್ಮೆ ರಾಜ್ಯಾದ್ಯಂತ ಪ್ರವಾಸ ಮಾಡುವೆ, ಸಾಮೂಹಿಕವಾಗಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಸೀಟು ಗೆಲ್ಲಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ
ಬಿಎಸ್ವೈ ಮುಂದಿನ ಹೊಸ ಪಕ್ಷ ಕಟ್ಟುತ್ತಾರೆ ಎನ್ನುವ ಪ್ರಶ್ನೆಗೆ ಯಾರು, ನಾನು ಇಲ್ಲ ಎಂದು ಎದ್ದು ಹೊರಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿಸಿ ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.