– ದ.ಕ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ
ಮಂಗಳೂರು: ವೈಭವೀಕರಣವಿಲ್ಲದ ನೈಜ ಸುದ್ದಿಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಪತ್ರಿಕಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು (Press Day) ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: 15 ದಾಖಲೆ ಸಲ್ಲಿಸಿದರೂ `ಭಾರತೀಯ’ ಎಂದು ನಿರೂಪಿಸುವಲ್ಲಿ ವಿಫಲನಾದ ಕೂಲಿ ಕಾರ್ಮಿಕ
ಆಡಳಿತ ವ್ಯವಸ್ಥೆ ಹಾಗೂ ಮಾಧ್ಯಮ ಒಂದೇ ಹಾದಿಯಲ್ಲಿ ಸಾಗುತ್ತಿದ್ದು, ಇದು ಅರೋಗ್ಯಕರ ಬೆಳವಣಿಗೆ. ಒಂದೇ ಘಟನೆಯನ್ನು ಹಲವು ರೀತಿಯಲ್ಲಿ ವೈಭವೀಕರಣ ಮಾಡಲಾಗಿರುವ ಸುದ್ದಿಗಳನ್ನು ನಾನು ಹಿಂದೆ ಗಮನಿಸಿದ್ದೆ. ಆದರೆ, ಇಂದು ಫ್ಯಾಕ್ಟ್ಚೆಕ್ ಮಾದರಿಯಲ್ಲಿ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಇದು ಸಂತಸದ ವಿಚಾರ. ಪತ್ರಕರ್ತರು ನೈಜ ಸುದ್ದಿಗಳನ್ನು ನೈಜವಾಗಿ ನೀಡಬೇಕು. ಸಮಾಜದಲ್ಲಿ ವಸ್ತುನಿಷ್ಠರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಪತ್ರಕರ್ತರು ಪಾರದರ್ಶಕ ವರದಿ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಬೇಕು. ಸಮಾಜದಲ್ಲಿ ಬದಲಾವಣೆ ಎನ್ನುವುದು ಏಕಾಏಕಿ ಆಗಲು ಸಾಧ್ಯವಿಲ್ಲ. ಕಮ್ಯೂನಲ್ ಫೀಲಿಂಗ್ ಎನ್ನುವುದು ನಿರಂತರವಾಗಿರುತ್ತದೆ. ಅಂತಹ ಭಾವನೆ ನಿಧಾನವಾಗಿ ಬದಲಾಗಬೇಕು. ಅದು ಪತ್ರಕರ್ತರಿಂದ ಮಾತ್ರ ಸಾಧ್ಯ. ಎಲ್ಲವೂ ಶಾಂತಿಯುತವಾಗಿದ್ದಾಗ ಏಕಾಏಕಿ ಸಣ್ಣಪುಟ್ಟ ಘಟನೆಗಳು ನಡೆದರೆ ಅಂತಹ ಸಂದರ್ಭದಲ್ಲಿ ಪಾರದರ್ಶಕ ವರದಿಗಾರಿಕೆ ಅಗತ್ಯವಾಗಿದೆ. ಅಪರಾಧಗಳು ನಡೆದಾಗ ವ್ಯಾಪಾರ ವ್ಯವಹಾರ, ರಾಜಕೀಯ ಸಹಿತ ವಿವಿಧ ಕ್ಷೇತ್ರಗಳಿಗೆ ಪರಿಣಾಮ ಬೀರುವ ಮೂಲಕ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅಪರಾಧ ಮಾಡುವವರು ಎಷ್ಟೇ ಚಾಲಾಕಿಗಳಾಗಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಡಿನ ಶಾಂತಿಗಾಗಿ ಎಲ್ಲರೂ ಸಹಕರಿಸುವ ಜತೆಗೆ ಶ್ರಮಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅರಣ್ಯ ಸಂರಕ್ಷಣಾಕಾರಿ ಡಾ.ವಿ.ಕರಿಕಾಲನ್ ಮಾತನಾಡುತ್ತಾ, ಪತ್ರಕರ್ತರು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇದರೊಂದಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಬಲಗೊಳಿಸಲು ಸಹಕಾರ ನೀಡುತ್ತಿದ್ದಾರೆ. ಕರಾವಳಿಯ ಜನ ಸುಶಿಕ್ಷಿತರಾಗಿದ್ದು, ಇಂತಹ ಶಿಕ್ಷಣ ವ್ಯವಸ್ಥೆ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಉತ್ತಮ ಶಿಕ್ಷಣ ಪಡೆದರೂ, ಲೋಕಸೇವಾ ಆಯೋಗದ ಮೂಲಕ ಜನಸೇವೆಗೆ ಮುಂದಾಗುವವರು ವಿರಳ. ಅದರ ಬದಲಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸಾರ್ವಜನಿಕ ಸೇವೆಗೆ ಉತ್ತಮ ಅವಕಾಶಗಳಿವೆ. ಅವುಗಳನ್ನು ಕರಾವಳಿಯ ಯುವ ಸಮುದಾಯ ಬಳಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ಕಲ್ಲು ಕ್ವಾರಿ ದುರಂತ – ಅಧಿಕೃತ ವರದಿ ಬಂದ ಬಳಿಕ ಕ್ರಮಗಳ ಬಗ್ಗೆ ತೀರ್ಮಾನ: ಡಿಕೆಶಿ
ಪತ್ರಿಕಾ ದಿನದ ಬಗ್ಗೆ ಹರಿಪ್ರಸಾದ್ ಅಡ್ಪಂಗಾಯ ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ವಹಿಸಿದ್ದರು. ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿಯವರನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸನ್ಮಾನಿಸಿದರು. ಅತಿಥಿಗಳು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಸಮಾರಂಭದ ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಉಪಸ್ಥಿತರಿದ್ದರು. ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವಿವರಗಳನ್ನು ವಿಜಯ ಕೋಟ್ಯಾನ್ ಪಡು
ನೀಡಿದರು. ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.
