ಯಾದಗಿರಿ: ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಮತ್ತು ತಮ್ಮ ತಾಯಿ ನಿಧನದಿಂದ ಇಷ್ಟು ದಿನ ಮಂಕಾಗಿದ್ದ ಸುರಪುರ ಬಿಜೆಪಿ ಶಾಸಕ ರಾಜುಗೌಡ, ತಮ್ಮ ನೋವನೆಲ್ಲಾ ಮರೆತು ಭರ್ಜರಿ ಕಬಡ್ಡಿಯಾಡಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೇಟೆ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ಮಂಡಳಿ ಹಮ್ಮಿಕೊಂಡಿದ್ದ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಗಳ ಉದ್ಘಾಟನೆಗೆ ಶಾಸಕ ರಾಜುಗೌಡ ತೆರಳಿದ್ದರು.
ಈ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜುಗೌಡ ಕೆಲ ಹೊತ್ತು ಕಬಡ್ಡಿ ಆಡಿದ್ದಾರೆ. ಪ್ರೊಫೆಷನಲ್ ಕಬಡ್ಡಿ ಆಟಗಾರರಂತೆ ಡೈ ಹೊಡೆದು ಕಬಡ್ಡಿಯಾಡಿದ ಶಾಸಕ ರಾಜುಗೌಡ ತಮ್ಮ ಅಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡರು.
ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನ ಗೆದ್ದಿದ್ದಾರೆ. ಈ ಹಿಂದೆಯೂ ರಾಜುಗೌಡ ಮಧ್ಯರಾತ್ರಿ ಯುವಕರೊಂದಿಗೆ ಕಬ್ಬಡಿ ಆಟವಾಡಿದ್ದರು.