– ಕಾಂಗ್ರೆಸ್ಸಿಗರಿಗೆ ದೃಷ್ಟಿಯೇ ಇಲ್ಲ, ದೂರದೃಷ್ಟಿ ಎಲ್ಲಿಂದ ಬರಬೇಕು
– ಮಾಜಿ ಸಿಎಂ, ಡಿಸಿಎಂ ವಿರುದ್ಧ ಶಾಸಕ ಕಿಡಿ
ಬೆಂಗಳೂರು: ಕೇಂದ್ರದ ಬಜೆಟ್ ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗಿದೆ. ರೈತ ಭಾರತ, ಯುವ ಭಾರತ, ಮಹಿಳಾ ಭಾರತ ಬಜೆಟ್ನಲ್ಲಿ ಕಾಣುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಬಡವರಿಗೆ ಏನೂ ಮಾಡಿಲ್ಲ ಅಂತ ಆರೋಪಿಸಿದ್ದಾರೆ. ಬಡವರಿಗೆ 1.95 ಕೋಟಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ತಂದಿದ್ದು ಕಾಂಗ್ರೆಸ್ ಅಲ್ಲ ಬಿಜೆಪಿ ಎಂದು ಕುಟುಕಿದರು.
ಕಾಂಗ್ರೆಸ್ನವರಿಗೆ ದೃಷ್ಟಿಯೇ ಇಲ್ಲ. ಇನ್ನು ದೂರದೃಷ್ಟಿ ಎಲ್ಲಿಂದ ಬರಬೇಕು. ವಿರೋಧ ಮಾಡಬೇಕು ಅಂತ ವಿರೋಧ ಮಾಡುವುದು ಸರಿಯಲ್ಲ. ಅವರಿಗೆ 2019 ಬಜೆಟ್ ಅರ್ಥನೇ ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಬಜೆಟ್ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳಲ್ಲೂ ರಾಜ್ಯಕ್ಕೂ ಫಲ ಸಿಗುತ್ತಿದೆ. ಯುಪಿಎ ಅವಧಿಯಲ್ಲಿ ತೈಲ ಬೆಲೆ ಹೆಚ್ಚಿಸಿದ್ದಾಗ ಕಾಂಗ್ರೆಸ್ ನವರು ಬಾಯಿ ಮುಚ್ಚಿಕೊಂಡಿದ್ದರು. ಈಗ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಪುತ್ತೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಸಂಬಂಧ ಎಬಿವಿಪಿ ಸಂಘಟನೆ ನಿಷೇಧಕ್ಕೆ ಆಗ್ರಹ ಕೇಳಿ ಬರುತ್ತಿದೆ. ಆರೋಪಿಗಳು ಸಂಘಟನೆಯಲ್ಲಿ ಇದ್ದರು ಅಂದರೆ ಅವರು ಏನಾಗಿದ್ದರು ಎನ್ನುವುದು ಮುಖ್ಯವಾಗುತ್ತದೆ. ಅವರ ಅಪರಾಧಕ್ಕೂ ಸಂಘಟನೆಗೂ ಸಂಬಂಧವಿಲ್ಲ. ಎಬಿವಿಪಿ ಈಗಾಗಲೇ ಆರೋಪಿಗಳು ನಮ್ಮ ಸದಸ್ಯರಲ್ಲ ಎಂದು ಸ್ಪಷ್ಟಪಡಿಸಿದೆ. ಕಾನೂನು ತನ್ನ ಕೆಲಸ ಮಾಡುತ್ತದೆ ಹಾಗೂ ಈ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.