– ಬಂಡಾಯ ಸಂಸದರ ಡಿಮ್ಯಾಂಡ್ಗಳ ಬಗ್ಗೆ ಇಂದು ಚರ್ಚೆ
– ಹುಲಿ ಚರ್ಮ ಧರಿಸಿದ ಮಾತ್ರಕ್ಕೆ ತೋಳ ಹುಲಿಯಾಗಲ್ಲ: ಶಿಂಧೆ ಕಿಡಿ
ನವದೆಹೆಲಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಆಪರೇಷನ್ ಟೈಗರ್ (Operation Tiger), ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ಉದ್ಧವ್ ಠಾಕ್ರೆ (Uddhav Thackeray) ಈಗಾಗಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಇದರ ಮಧ್ಯೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಜೂನ್ 20 ಶನಿವಾರ) ರೆಬಲ್ ಸಂಸದರು ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಉನ್ನತ ಮೂಲಗಳ ಪ್ರಕಾರ, ಇಂದು ಡಿಸಿಎಂ ಏಕನಾಥ್ ಶಿಂಧೆ (Eknath Shinde) ಅವರು ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರನ್ನ ಭೇಟಿಯಾಗಿ, ʻಆಪರೇಷನ್ ಟೈಗರ್ʼ ಬಗ್ಗೆ ಚರ್ಚಿಸಲಿದ್ದಾರೆ. ಉದ್ಧವ್ ಬಣದ ರೆಬೆಲ್ ಸಂಸದರು ಮಾಡಿರುವ ಬೇಡಿಕೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ. ಆದ್ರೆ ಬಂಡಾಯ ಸಂಸದರ ಬೇಡಿಕೆ ಏನಿದೆ ಅನ್ನೋದು ಇನ್ನೂ ಅಧಿಕೃತವಾಗಿಲ್ಲ.
Mumbai | Maharashtra Dy CM Eknath Shinde says, “A wolf wearing a tiger’s skin does not become a tiger. Four years ago, these same wolves had threatened me saying, ‘You’ll have to come to Mumbai,’ ‘You’ll have to pass through Worli.’ Does anyone own Mumbai?” (19.06) pic.twitter.com/0JKk623KOX
— ANI (@ANI) June 20, 2026
ಫಸ್ಟ್ ಫೋಟೋ ವೈರಲ್
ರಾಜಕೀಯ ಕ್ಷಿಪ್ರ ಬೆಳವಣಿಗೆಯ ನಡುವೆ ಉದ್ಧವ್ ಬಣದ ಸಂಸದರು ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಂಡಾಯ ಸಂಸದರಾದ ನಾಗೇಶ್ ಪಾಟೀಲ್ ಅಶ್ಟಿಕರ್, ಸಂಜಯ್ ದಿನ ಪಾಟೀಲ್ ಮತ್ತು ಸಂಜಯ್ ದೇಶಮುಖ್, ಅಭಿಷೇಕ್ ವರ್ಮಾ ಅವರೊಂದಿಗೆ ದೆಹಲಿಯ ಪಂಚತಾರಾ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದು ಗೊತ್ತುಪಡಿಸಿದ ಸ್ಥಳದಲ್ಲಿ ವಾಸ್ತವ್ಯ ಹೂಡಲಿದ್ದು, ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬಂಡಾಯ ಸಂಸದರು ನಾಳೆ (ಜೂನ್ 21) ಶಿವಸೇನೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ತೋಳ ಹುಲಿ ಆಗಲ್ಲ; ಕುಟುಕಿದ ಶಿಂಧೆ
ಇನ್ನೂ ʻಆಪರೇಷನ್ ಟೈಗರ್ʼ ಗದ್ದಲದ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ, ಉದ್ಧವ್ ಶಿವಸೇನೆಯನ್ನ ತೀವ್ರವಾಗಿ ಟೀಕಿಸಿದ್ದಾರೆ. ʻಹುಲಿ ಚರ್ಮ ಧರಿಸಿದ ಮಾತ್ರಕ್ಕೆ ತೋಳ ಹುಲಿಯಾಗಲ್ಲʼ ಎಂದು ಕುಟುಕಿದ್ದಾರೆ.
4 ವರ್ಷಗಳ ಹಿಂದೆ, ಇದೇ ತೋಳಗಳು ನೀವು ಮುಂಬೈಗೆ ಬರಬೇಕು, ನೀವು ವರ್ಲಿ ಮೂಲಕವೇ ಹಾದು ಹೋಗಬೇಕು ಎಂದು ನನಗೆ ಬೆದರಿಕೆ ಹಾಕಿದ್ದವು. ಈಗ ಮುಂಬೈ ಯಾರ ಬಳಿ ಇದೆ ಎಂದು ಶಿಂಧೆ ಪ್ರಶ್ನೆ ಮಾಡಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಲೋಕಸಭೇ ಸ್ಪೀಕರ್ ಓಂ ಬಿರ್ಲಾ ಅವರನ್ನ ಭೇಟಿ ಮಾಡಿದ್ದ ಶಿವಸೇನೆ-ಯುಬಿಟಿಯ 6 ಬಂಡಾಯ ಸಂಸದರು, ಲೋಕಸಭೆಯಲ್ಲಿ ಶಿವಸೇನೆ-ಏಕನಾಥ್ ಶಿಂಧೆ ಬಣಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ ಉದ್ಧವ್ ಠಾಕ್ರೆ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಲು ಮುಂದಾಗಿದ್ದಾರೆ ಎಂದು ಈ ಸಂಸದರು ಗಂಭೀರ ಆರೋಪ ಮಾಡಿದ್ದರು.
