ಮೈಸೂರು: ಮೈಸೂರಿನ ವರುಣಾ ಕ್ಷೇತ್ರದಲ್ಲಿನ ಸುತ್ತೂರು ಶ್ರೀ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಶ್ರೀಗಳ ಆಶೀರ್ವಾದ ಪಡೆದು ಕೆಲಕಾಲ ಶ್ರೀಗಳ ಜೊತರ ಮಾತುಕತೆ ನಡೆಸಿದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಇಡೀ ದೇಶದಲ್ಲಿ ರಾಜ್ಯದ ಉಪ ಚುನಾವಣೆ ಸುದ್ದಿಯಾಗಿತ್ತು. ಚುನಾವಣೆ ಮುಗಿದ ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರ ಭೇಟಿ ವೇಳೆ ಕೇವಲ ಉಪಚುನಾವಣೆ ವಿಚಾರವನ್ನಷ್ಟೆ ಚರ್ಚೆ ಮಾಡಿದೆ ಎಂದು ತಿಳಿಸಿದರು.
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆದ್ದ ವಿಚಾರವನ್ನು ಕೂಡ ಅಮಿತ್ ಶಾ ಚರ್ಚೆ ಮಾಡಿದರು. ಅಲ್ಲಿ ಗೆಲುವು ಸಾಧಿಸಿದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ಚುನಾವಣೆ ಗೆಲುವು ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ಸೃಷ್ಟಿಯಾಗಿದೆ ಎಂದರು.
ಸಚಿವ ಸ್ಥಾನದ ವಿಚಾರವಾಗಿ ಕೆಲವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಸಚಿವನಾಗಬೇಕು ಎಂದು ಆಕಾಂಕ್ಷೆಗಳಿರುತ್ತೆ. ಆದರೆ ಈ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.