ಮಡಿಕೇರಿ: ಎರಡು ಬೈಕ್ ಮತ್ತು ಡಬಲ್ ಬ್ಯಾರಲ್ ಕೋವಿಯನ್ನು ಕದ್ದಿದ್ದ ವ್ಯಕ್ತಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದ ಕೆ.ಸಿ.ಅಶೋಕ್ ಬಂಧಿತ ಆರೋಪಿ. ಈತ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ಎರಡು ಬೈಕ್ ಮತ್ತು ಕುಶಾಲನಗರ ತಾಲೂಕಿನ ಅಭ್ಯತ್ ಮಂಗಲ ಗ್ರಾಮದಿಂದ ಎರಡು ನಳಿಕೆ(ಡಬಲ್ ಬ್ಯಾರಲ್) ಕೋವಿಯನ್ನು ಕಳ್ಳತನ ಮಾಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಭಾನುವಾರ ಕೂಡಿಗೆ ಸೇತುವೆ ಬಳಿ ಬೈಕ್ ನಲ್ಲಿ ಬರುತ್ತಿದ್ದ ಆರೋಪಿಯನ್ನು ತಡೆದು ಪರಿಶೀಲಿಸಿದಾಗ ಕಳ್ಳತನವಾಗಿದ್ದ ಬೈಕ್ ಹಾಗೂ ಕೋವಿ ಪತ್ತೆಯಾಗಿದೆ. ಇದನ್ನೂ ಓದಿ:ಡಿಸ್ಕಸ್ ಥ್ರೋ ವಿನೋದ್ ಕುಮಾರ್ ಕಂಚಿನ ಪದಕಕ್ಕೆ ತಡೆ
ಆರೋಪಿಯು ಕಳೆದ 15 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಂದಿದ್ದು, ತಕ್ಷಣದಿಂದಲೇ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೇ ವಿಚಾರಣೆ ವೇಳೆ ಆರೋಪಿ ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮದ ಮನೆಯೊಂದರಲ್ಲಿ ಸಹ ಕಳ್ಳತನ ಮಾಡಲು ಪ್ರಯತ್ನಿಸಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಆರೋಪಿಯಿಂದ 1ಲಕ್ಷ ಮೌಲ್ಯದ ಕೋವಿ ಮತ್ತು 52 ಸಾವಿರ ಬೆಲೆ ಬಾಳುವ ಹೀರೋ ಹೊಂಡಾ ಬೈಕ್, 20 ಸಾವಿರ ಬೆಲೆಯ ಟಿವಿಎಸ್ ಬೈಕ್ನನ್ನು ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಶೈಲೇಂದ್ರ ಸೂಚನೆಯಂತೆ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸರು ಮತ್ತು ಕುಶಾಲನಗರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ:ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ