– ಪುರಸ್ಕಾರ ಪಟ್ಟಿಗೆ ಸೇರಿದ ಮೊದಲ ಮೋಟಾರ್ ಸ್ಪೋರ್ಟ್ ಪಟು
ನವದೆಹಲಿ: ಬೆಂಗಳೂರಿನ ಯಶ್ ಆರಾಧ್ಯ ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಈ ಪುರಸ್ಕಾರ ಪಡೆದ ಭಾರತದ ಮೊದಲ ಮೋಟಾರ್ ಸ್ಪೋರ್ಟ್ ಪಟು ಎನ್ನುವ ಹಿರಿಮೆಗೆ ಯಶ್ ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಬಾಲಕ ಯಶ್ ಗುರುವಾರ ಪ್ರಶಸ್ತಿ ಸ್ವೀಕರಿಸಿದ್ದಾರೆ. 9ನೇ ವಯಸ್ಸಿನಿಂದಲೇ ರೇಸಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯಶ್ ತಮ್ಮ ಸಾಧನೆಯ ಹಾದಿಯಲ್ಲಿ 13 ಚಾಂಪಿಯನ್ಶಿಪ್ಗಳನ್ನು ಗೆದ್ದಿದ್ದಾರೆ. 17 ವರ್ಷದ ರೇಸರ್ ಯಶ್ ಈವರೆಗೂ 65 ಬಾರಿ ಪೋಡಿಯಂ ಫಿನಿಶ್ ಮಾಡಿದ್ದು, 12 ಪ್ರಶಸ್ತಿಗಳನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿಕೊಂಡಿದ್ದಾರೆ.
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು 18 ವಯಸ್ಸಿನೊಳಗಿನ ಅಸಾಧಾರಾಣ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಯಶ್ ಸೇರಿದಂತೆ 49 ಪ್ರತಿಭಾವಂತರನ್ನು ಈ ಪ್ರಶಸ್ತಿಗೆ, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಆಯ್ಕೆ ಮಾಡಿತ್ತು. ಈ ಪ್ರತಿಭಾವಂತ ವಿದ್ಯಾರ್ಥಿಗಳು ಜನವರಿ 26ರಂದು ಗಣರಾಜ್ಯೋತ್ಸವದ ಪರೇಡ್ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಭೇಟಿ ಮಾಡಲಿದ್ದಾರೆ.
ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಹಾಗೂ ವಿನಮ್ರತೆಯಿಂದ ಪುರಸ್ಕಾರ ಸ್ವೀಕರಿಸುತ್ತೇನೆ. ಗೌರವಾನ್ವಿತ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದು ಹಾಗೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ದೊಡ್ಡ ಗೌರವ. ನನ್ನ ವೃತ್ತಿಬದುಕಿನಲ್ಲಿ ಸಾಕಷ್ಟು ಪರಿಶ್ರಮ ವಹಿಸಿದ್ದೇನೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಯಶಸ್ಸು ಸಾಧಿಸಿದ ನಂತರ ಈ ಗೌರವ ಸಿಗುತ್ತಿರುವುದು ಸಂತಸ ನೀಡಿದೆ ಎಂದು ಯಶ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಹೇಳಿದರು.
ನನ್ನ ಜೀವನದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಶೇಷವಾಗಿ ಉಳಿಯಲಿದೆ. ಇದು ಕೇವಲ ನನ್ನೊಬ್ಬನ ಸಾಧನೆಗೆ ಸಿಕ್ಕಿರುವುದಲ್ಲ. ಇಡೀ ತಂಡಕ್ಕೆ ಸಿಕ್ಕಿರುವುದಾಗಿದೆ. ಈ ಪ್ರಶಸ್ತಿ ಯುವ ರೇಸರ್ ಗಳಿಗೆ ಸಾಧನೆಗೈಯಲು ಸ್ಫೂರ್ತಿ ನೀಡಲಿದೆ. ಅವರು ಇನ್ನಷ್ಟು ಪರಿಶ್ರಮದೊಂದಿಗೆ ಮುನ್ನುಗ್ಗುತ್ತಾರೆ ಎಂದರು.
ಸಾಧಾರಣ ಹಿನ್ನೆಲೆ ಹಾಗೂ ರೇಸಿಂಗ್ ಕ್ಷೇತ್ರದಲ್ಲಿ ಯಾವುದೇ ಕುಟುಂಬಸ್ಥರು ಇಲ್ಲದಿದ್ದರೂ, ಯಶ್ ತಮ್ಮ ಸ್ವಂತ ಶ್ರಮದಿಂದ ಈ ಮಟ್ಟಕ್ಕೆ ತಲುಪಿದ್ದಾರೆ. 8 ವರ್ಷಗಳ ಹಿಂದೆ ಜೆಕೆ ಟೈಯರ್ ರಾಷ್ಟ್ರೀಯ ಗೋ ಕಾರ್ಟಿಂಗ್ ಚಾಂಪಿಯಸ್ಶಿಪ್ನಿಂದ ವೃತ್ತಿಬದುಕು ಆರಂಭಿಸಿದ ಯಶ್, ಅಕ್ಬರ್ ಇಬ್ರಾಹಿಂ ಅವರ ಮೀಕೋ ಮೋಟಾರ್ ಸ್ಪೋರ್ಟ್ ತಂಡವನ್ನು ಪ್ರತಿನಿಧಿಸಿದ್ದರು. ನಿರಂತರವಾಗಿ ಮೆಟ್ಟಿಲುಗಳನ್ನು ಏರುತ್ತಾ, ಫಾರ್ಮುಲಾ ರೇಸಿಂಗ್ವರೆಗೂ ತಲುಪಿದ್ದಾರೆ.
ಯಶ್ 2015ರಲ್ಲಿ ಸ್ಪೇನ್, ಬೆಲ್ಜಿಯಂ ಹಾಗೂ ಫ್ರಾನ್ಸ್ ನಲ್ಲಿ ನಡೆದ ಸಿಐಕೆಎಫ್ಐಎ ಅಕಾಡೆಮಿ ಟ್ರೋಫಿ ಸೇರಿದಂತೆ ಅಂತರಾಷ್ಟ್ರೀಯ ಚಾಂಪಿಯಸ್ಶಿಫ್ಗಳಲ್ಲೂ ಪಾಲ್ಗೊಂಡಿದ್ದರು. 2017ರಲ್ಲಿ ಪೋರ್ಚುಗಲ್ನಲ್ಲಿ ನಡೆದ ರೋಟಾಕ್ಸ್ ವಿಶ್ವ ಫೈನಲ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಎಫ್ಎಂಎಸ್ಸಿಐನಿಂದ ನಾಮನಿರ್ದೇಶನಗೊಂಡಿದ್ದರು. 2019ರಲ್ಲಿ ರೋಮ್ನಲ್ಲಿ ನಡೆದ ಎಫ್ಐಎ ಮೋಟಾರ್ ಸ್ಪೋಟ್ರ್ಸ್ ಗೇಮ್ಸ್ ನಲ್ಲೂ ಯಶ್ ಸ್ಪರ್ಧಿಸಿದ್ದರು.
2019ರ ಋತುವಿನಲ್ಲಿ ಯಶ್ ಫಾರ್ಮುಲಾ-4 ಆಗ್ನೇಯ ಏಷ್ಯಾ ಚಾಂಪಿಯಸ್ಶಿಪ್ ಪಾದಾರ್ಪಣೆ ಮಾಡಿ, 2 ಬಾರಿ ಪೋಡಿಯಂ ಫಿನಿಶ್ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.
ಭಾರತೀಯ ಮೋಟಾರ್ ಸ್ಪೋರ್ಟ್ ಯಶಸ್ಸಿನ ಉತ್ತುಂಗಕ್ಕೇರುತ್ತಿದೆ. ಮೊದಲು, ಗೌರವ್ ಗಿಲ್ ನಮ್ಮ ಕ್ಷೇತ್ರದಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊದಲಿಗ ಎನಿಸಿಕೊಂಡರು. ಈಗ ಯಶ್ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪಡೆದಿದ್ದಾರೆ. ಭಾರತೀಯ ಮೋಟಾರ್ ಸ್ಪೋರ್ಟ್ಸ್ ನಲ್ಲಿ ಇದು ಅತ್ಯುನ್ನತ ಸಾಧನೆಯಾಗಿದ್ದು, ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ವರ್ಷಗಳ ಬಳಿಕ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. ಯಶ್ ಒಬ್ಬ ಪ್ರತಿಭಾವಂತ ಚಾಲಕ. ಈ ಪ್ರಶಸ್ತಿ ಅವರಲ್ಲಿ ಮತ್ತಷ್ಟು ಪ್ರೋತ್ಸಾಹ ತುಂಬಲಿದ್ದು, ಇನ್ನಷ್ಟು ಸಾಧನೆಗಳನ್ನು ಮಾಡಲು ಸಹಕಾರಿಯಾಗಲಿದೆ ಎಂದು ಜೆಕೆ ಟೈಯರ್ ಮೋಟಾರ್ ಸ್ಪೋಟ್ರ್ಸ್ ಮುಖ್ಯಸ್ಥ ಸಂಜಯ್ ಶರ್ಮಾ ಹೇಳಿದ್ದಾರೆ.
ಯಶ್ ಸಾಧನೆ ನಮ್ಮೆಲ್ಲರಿಗೂ ಖುಷಿ ನೀಡಿದೆ. ನಾವು ಅರ್ಹರಿದ್ದರೂ ನಮ್ಮನ್ನು ಪರಿಗಣಿಸಲು ಹೆಚ್ಚಿನ ಸಮಯವಾಗಿದೆ. ಆದರೆ ಈಗ ಗೌರವ್ ಗಿಲ್ ಹಾಗೂ ಯಶ್ಗೆ ಸಿಕ್ಕಿರುವ ಗೌರವದಿಂದ ನಮಗೆ ಮತ್ತಷ್ಟು ಪ್ರಶಸ್ತಿ, ಪುರಸ್ಕಾರಗಳು ಸಿಗಲಿದೆ ಎನ್ನುವ ವಿಶ್ವಾಸ ಮೂಡಿಸಿದೆ. ಜನ ನಮ್ಮ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದು ಎಫ್ಎಂಎಸ್ಸಿಐನ ಅಧ್ಯಕ್ಷ ಜೆ.ಪೃಥ್ವಿರಾಜ್ ಹೇಳಿದರು.
ಪುಸ್ತಕವನ್ನು ಅದರ ಮುಖಪುಟ ನೋಡಿ ನಿರ್ಣಯಿಸಬಾರದು ಎನ್ನುವುದು ಹಳೆಯ ಮಾತು. ಯಶ್ ಆರಾಧ್ಯಯ ವಿಚಾರದಲ್ಲಿ ಈ ಮಾತು ಸೂಕ್ತವೆನಿಸುತ್ತದೆ. ಅವರು ಮೊದಲು ಗೋ ಕಾರ್ಟಿಂಗ್ಗೆ ಕಾಲಿಟ್ಟಾಗ ಯಾರೂ ಈ ಹುಡುಗ ಇಷ್ಟು ದೂರ ಬಂದು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರನಾಗುತ್ತಾನೆ ಎಂದುಕೊಂಡಿರಲಿಲ್ಲ. ಆದರೆ ಆತನಲ್ಲಿರುವ ಉತ್ಸಾಹ, ಕ್ರೀಡೆಯ ಬಗ್ಗೆ ಇರುವ ಪ್ರೀತಿ, ಛಲವನ್ನು ಗಮನಿಸಿದ್ದರೆ ಮೋಟಾರ್ ಸ್ಪೋಟ್ರ್ಸ್ ನಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಅನಿಸದೆ ಇರಲು ಸಾಧ್ಯವಿಲ್ಲ. ಪ್ರತಿ ಹಂತದಲ್ಲೂ ಕುಟುಂಬದ ಪ್ರೋತ್ಸಾಹ, ಯಾವುದು ಅಸಾಧ್ಯಯವಲ್ಲ ಎನ್ನುವ ಅವರ ತಂದೆಯ ಹಠದಿಂದ ಯಶ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ. ಇದು ಕೇವಲ ಆರಂಭವಷ್ಟೇ, ಆತನಲ್ಲಿರುವ ಬಲವಾದ ನಂಬಿಕೆ ಹಾಗೂ ಅವನ ಸುತ್ತಲಿರುವವರ ಪ್ರೋತ್ಸಾಹದಿಂದ ಯಶ್ ಅಂತರಾಷ್ಟ್ರೀಯ ವೃತ್ತಿಪರ ರೇಸಿಂಗ್ನಲ್ಲಿ ತನ್ನದೇ ಛಾಪು ಮೂಡಿಸಲಿದ್ದಾನೆ ಎಂದು ಮೀಕೋ ಸ್ಪೋರ್ಟ್ ಮುಖ್ಯಸ್ಥ ಹಾಗೂ ಯಶ್ ಮಾರ್ಗದರ್ಶಕ ಅಕ್ಬರ್ ಇಬ್ರಾಹಿಂ ತಿಳಿಸಿದರು.