ಬೆಂಗಳೂರು: ನಗರದ ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ಆಡಲು ಬಂದ ಕೆಲ ಬಾಜಿದಾರರು ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಇಂದು ಟರ್ಫ್ ಕ್ಲಬ್ನಲ್ಲಿ ರೇಸ್ ನಡೆಯುತ್ತಿದ್ದ ಕಾರಣ ಕುದುರೆಗಳ ಮೇಲೆ ಬಾಜಿ ಕಟ್ಟಲು ಆಗಮಿಸಿದ್ದರು. ಆದರೆ ರೇಸ್ ನಡೆಯುತ್ತಿದ್ದ ವೇಳೆ ವಿಲ್ ಟು ವಿನ್ ಹೆಸರಿನ ಕುದುರೆ ಜಾರಿ ಬಿದ್ದಿದ್ದು, ಪರಿಣಾಮ ಕುದುರೆಯ ಕಾಲು ಮುರಿದಿದೆ. ಅಲ್ಲದೇ ರೇಸ್ ವೇಳೆ ಕುದುರೆ ಬಿದ್ದ ಪರಿಣಾಮ ಅದರ ಹಿಂದೆ ಬರುತ್ತಿದ್ದ ಮತ್ತೆರಡು ಕುದುರೆಗಳು ಬಿದ್ದಿದ್ದವು.
ಮೊದಲು ಬಿದ್ದ ಕುದುರೆ ಸಂಜಯ್ ಆರ್ ಠಕ್ಕರ್ ಅವರ ಮಾಲೀಕತ್ವದಾಗಿದ್ದು, ಪಾರ್ವತಿ ಡಿ ಭೈರಾಂಜಿ ಟ್ರೈನರ್ ಆಗಿದ್ದಾರೆ. ಇಂದು ರೇಸ್ನಲ್ಲಿ ವಿಲ್ ಟು ವಿನ್ ಕುದುರೆಯನ್ನು ಜಾಕಿ ಸೂರಜ್ ನೆರಡು ಓಡಿಸುತ್ತಿದ್ದರು. ಇಂದಿನ ರೇಸ್ನಲ್ಲಿ ನಯಾಬ್ ಹೆಸರಿನ ಕುದುರೆ ರೇಸ್ ಗೆದ್ದಿದ್ದು, ಪರಿಣಾಮ ವಿಲ್ ಟು ವಿನ್ ಕುದುರೆಗೆ ಬಾಜಿ ಕಟ್ಟಿದ್ದ ಜನ ಆಕ್ರೋಶ ವ್ಯಕ್ತಪಡಿಸಿ ಟರ್ಫ್ ಕ್ಲಬ್ ಮೇಜು, ಕುರ್ಚಿಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕೂಡಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಕ್ಲಬ್ನಿಂದ ಹೊರಕ್ಕೆ ಕಳುಹಿಸಿದ್ದಾರೆ.
ಸದ್ಯ ಘಟನೆಗೆ ಟರ್ಫ್ ಕ್ಲಬ್ ಮ್ಯಾನೇಜ್ ಮೆಂಟ್ ನಿರ್ಲಕ್ಷ್ಯವೇ ಎಂಬ ಆರೋಪ ಕೇಳಿ ಬಂದಿದ್ದು, ರೇಸ್ ಜಾಕಿಗಳು ಟ್ರ್ಯಾಕ್ ಸಮಸ್ಯೆ ಕುರಿತು ರಿಪೋರ್ಟ್ ಕೊಟ್ಟಿದ್ದರೂ ಮ್ಯಾನೇಜ್ಮೆಂಟ್ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರೇಸ್ ವೇಳೆ ಕುದುರೆ ಕಾಲು ಮುರಿದುಕೊಂಡಿದೆ ಎಂದು ಬಾಜಿ ಕಟ್ಟಿದವರು ಆರೋಪಿಸಿದ್ದಾರೆ. ಕಳೆದ ವಾರವೇ ರೇಸ್ನ ಟ್ರ್ಯಾಕ್ ಸರಿಯಿಲ್ಲ ಎಂದು ಜಾಕಿಗಳು ಟರ್ಫ್ ಕ್ಲಬ್ ಮ್ಯಾನೇಜ್ಮೆಂಟ್ಗೆ ದೂರು ನೀಡಿದ್ದರು. ಆದರೂ ಜಾಕಿಗಳ ದೂರನ್ನು ನಿರ್ಲಕ್ಷ್ಯ ಮಾಡಿದ್ದ ಕ್ಲಬ್ ರೇಸ್ ನಡೆಸಿ ಅವಘಡಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
https://twitter.com/Surajsn1/status/1195305718821212160