Bengaluru City
ಸಂಪತ್ ರಾಜ್ ತಪ್ಪಿತಸ್ಥ ಅನ್ನೋದನ್ನು ಪೊಲೀಸರು ಪ್ರೂವ್ ಮಾಡ್ಲಿ: ಸಿದ್ದರಾಮಯ್ಯ

– ಶಾಲಾ-ಕಾಲೇಜು ತೆಗೀಬೇಡಿ ಅಂತ ಪತ್ರ ಬರೆದಿದ್ದೆ
– ಜೆಡಿಎಸ್ದು ಅವಕಾಶವಾದಿ ರಾಜಕಾರಣ
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ನಲ್ಲಿ ಸಂಪತ್ ರಾಜ್ ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಆದರೆ ಸಾಬೀತು ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರನ್ನೂ ಬೆಂಬಲಿಸಲು ಅಥವಾ ಅವರ ಪರ ವಹಿಸಿಕೊಳ್ಳಲು ಹೋಗಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಚಾರ್ಜ್ ಶೀಟ್ ಹಾಕಿದ ತಕ್ಷಣ ಅಪರಾಧಿ ಆಗಲ್ಲ, ಅವರು ಆರೋಪಿ ಅಷ್ಟೆ. ಅವನ ಮೇಲಿನ ಆರೋಪಗಳು ಸಾಬೀತಾಗುವರೆಗೆ ಆರೋಪಿ ಅಷ್ಟೇ. ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲಿ. ಅದನ್ನ ಪ್ರೂವ್ ಮಾಡುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.
ಇದೇ ವೇಳೆ ಕಾಲೇಜು ಆರಂಭಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನಾನು ಎರಡು ಬಾರಿ ಪತ್ರ ಬರೆದಿದ್ದೆ. ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜು ತೆಗೀಬೇಡಿ ಅಂತ ಹೇಳಿದ್ದೆ. ಮಕ್ಕಳಿಗೆ ಡಿಸ್ಟೆನ್ಸ್ ಮೇಂಟೇನ್ ಮಾಡೋದು, ಸ್ಯಾನಿಟೈಸರ್ ಹಾಕಿಕೊಳ್ಳಲು ಆಗೋದಿಲ್ಲ. ಕಾಲೇಜು ತೆಗಿಲೇಬಾರದು ಅಂತ ಹೇಳಿದ್ದೆ. ಕಾಲೇಜು ತೆಗೆದಿದ್ದಾರೆ, ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತ ಟೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.
ಹಾಜರಿ ಕಡ್ಡಾಯಗೊಳಿಸಬಾರದು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣಿದು ಮಾಡ್ತಿದ್ದಾರಾ ಅನ್ನೋದು ನನಗೆ ಗೊತ್ತಿಲ್ಲ. ಖಾಸಗಿಯವರು ಸಂಬಳ ಕೊಡಬೇಕು. ಫೀಸ್ ಇಸ್ಕೊಳೋದೇನೇ ಇರೋಕಾಗಲ್ಲ. ಹೀಗಾಗಿ ಅವರು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಆರೋಗ್ಯ ಸರಿ ಇರಲಿಲ್ಲ ಅಷ್ಟೇ: ಡಿಕೆಶಿ
ಇನ್ನು ಮರಾಠಾ ಪ್ರಾಧಿಕಾರ ರಚನೆ ಬಗ್ಗೆ ಮಾತನಾಡಿ, ಪ್ರಾಧಿಕಾರ ರಚನೆ ಮಾಡಿದ್ದಕ್ಕೆ ನನ್ನ ವಿರೋಧ ಇಲ್ಲ. ಲಿಂಗಾಯತ ಸಮುದಾಯಕ್ಕೂ ಮಾಡಿದ್ರಾ ಈಗ. ಆದರೆ ಬೇರೆ ಸಮುದಾಯಗಳಿಗೂ ಮಾಡಬೇಕಲ್ಲವಾ? ಬಡತನದಲ್ಲಿ ಇರುವ ಸಮುದಾಯಗಳು ಬಹಳಷ್ಟು ಇವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಬಹಳಷ್ಟು ಸಮುದಾಯಗಳಿಗೂ ಪ್ರಾಧಿಕಾರ ಮಾಡಬೇಕು. ಇದು ಓಲೈಕೆಯ ರಾಜಕಾರಣ, ಬಸವಕಲ್ಯಾಣದಲ್ಲಿ ಮರಾಠ ಮತಗಳು 25 ರಿಂದ 30 ಸಾವಿರ ಮತಗಳು ಇವೆ. ಹಾಗಾಗಿ ಅವರನ್ನು ಓಲೈಸಲು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ, ಜೆಡಿಎಸ್ ಮೊದಲಿನಿಂದಲೂ ಒಳ ಒಪ್ಪಂದದಲ್ಲಿ ಇದ್ದರು. ಕಳೆದ ಚುನಾವಣೆಯಲ್ಲೂ ಒಳ ಒಪ್ಪಂದ, ಉಪ ಚುನಾವಣೆಯಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೆ ನಾನು ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಬಿ ಟೀಂ, ಬಿ ಪಾರ್ಟಿ ಅಂದಿದ್ದೆ. ಜೆಡಿಎಸ್ ದು ಅವಕಾಶವಾದಿ ರಾಜಕಾರಣ. ಅದಕ್ಕೆ ಮಂಡ್ಯದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಒಪ್ಪಂದ ಮಾಡಿಕೊಂಡಿರೋದು ಎಂದು ಗರಂ ಆದರು.
