ಬೆಂಗಳೂರು: 2021ನೇ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ (ತಿದ್ದುಪಡಿ) ವಿಧೇಯಕವನ್ನು ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎನ್. ನಾಗರಾಜು ಎಂ.ಟಿ.ಬಿ ಅವರ ಪರವಾಗಿ ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧಾನ ಸಭೆಯಲ್ಲಿ ಮಂಡಿಸಿದರು.
ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಸಭೆಯಲ್ಲಿ ಪರಿಣಾಮಕಾರಿಯಾಗಿ ಹಾಗೂ ವಿಷಯಾಧಾರಿತ ಚರ್ಚೆಯನ್ನು ನಡೆಸುವುದಕ್ಕಾಗಿ, ನಿರ್ದೇಶಕರ ಮಂಡಳಿಯಲ್ಲಿ ಸರ್ಕಾರೇತರ ಸದಸ್ಯರ ಸಂಖ್ಯೆಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಒಬ್ಬ ವ್ಯಕ್ತಿಯ ಬದಲಾಗಿ, ಪ್ರತಿಯೊಂದು ಕಂದಾಯವಲಯದಿಂದ ಮೂವರು ವ್ಯಕ್ತಿಗಳಂತೆ, ಆದರೆ ಒಂದೇ ಜಿಲ್ಲೆಯಿಂದ ಒಂದಕ್ಕಿಂತ ಹೆಚ್ಚಿರದಂತೆ ಹನ್ನೆರಡು ಸರ್ಕಾರೇತರ ಸದಸ್ಯರಿಗೆ ಕಡಿತಗೊಳಿಸಲು ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯಮಗಳ ಅಧಿನಿಯಮ, 1956ನ್ನು (1957ರ ಕರ್ನಾಟಕ ಅಧಿನಿಯಮ ಸಂಖ್ಯೆ 7) ತಿದ್ದುಪಡಿ ಮಾಡುವುದಯ ಅವಶ್ಯಕವೆಂದು ಪರಿಗಣಿಸಿದ ವಿಧೇಯಕವಾಗಿದೆ.
2021ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್(ತಿದ್ದುಪಡಿ) ವಿಧೇಯಕವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿಧಾನ ಸಭೆಯಲ್ಲಿ ಮಂಡಿಸಿದರು.
2021ನೇ ಸಾಲಿನ ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧಾನ ಸಭೆಯಲ್ಲಿ ಮಂಡಿಸಿದರು. ಇದನ್ನೂ ಓದಿ: ಮಂಡ್ಯ ಮೈಶುಗರ್ ಕಾರ್ಖಾನೆಗೆ ಬಿಡ್ ಮಾಡಲ್ಲ – ಪರಿಷತ್ನಲ್ಲಿ ನಿರಾಣಿ ಪ್ರಕಟ
2021ನೇ ಸಾಲಿನ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ) ವಿಧೇಯಕವನ್ನು ಪೌರಾಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎನ್.ನಾಗರಾಜು, ಎಂ.ಟಿ.ಬಿ. ಅವರ ಪರವಾಗಿ ಸಣ್ಣ ನೀರಾವರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧಾನ ಸಭೆಯಲ್ಲಿ ಮಂಡಿಸಿದರು.