– ತಾನು ಬಿಜೆಪಿಯಲ್ಲಿದ್ದಾಗಿನ ಗುಟ್ಟು ರಿವೀಲ್
ಶಿವಮೊಗ್ಗ: ಆಪರೇಷನ್ ಕಮಲ ಮಾಡಿದರೆ ನನ್ನ ಬಳಿಯಿರುವ ನಾಲ್ಕಾರು ಬಿಜೆಪಿ ಶಾಸಕರು ಕಾಂಗ್ರೆಸ್ ಬರಲು ತಯಾರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕಾಂಗ್ರೆಸ್ನ ಯಾವ ಶಾಸಕರು ಕೂಡ ಹೋಗೋ ಪ್ರಶ್ನೆಯೇ ಇಲ್ಲ. ಒಂದು ವೇಳೆ ಬಿಜೆಪಿಯವರು ಆಪರೇಷನ್ ಕಮಲ ಮಾಡಿದ್ರೆ, ನನ್ನ ಬಳಿ ಇರುವ ನಾಲ್ಕಾರು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲು ತಯಾರಾಗಿದ್ದಾರೆ. ಈ ಹಿಂದೆ ಆಪರೇಷನ್ ಕಮಲ ಮಾಡಿದ್ದು ನಾನೇ. ಹಾಗಾಗಿ ಈ ಬಗ್ಗೆ ಎಲ್ಲಾ ಮಾಹಿತಿ ನನ್ನ ಬಳಿ ಇದೆ. ನಾನು ಆಪರೇಷನ್ ಕಮಲ ಮಾಡಿದ್ದ ಸಂದರ್ಭದಲ್ಲಿ ಅನಿಲ್ ಲಾಡ್ ಬಳಿ 43 ಶಾಸಕರನ್ನು ಕೂಡಿಟ್ಟಿದ್ದೆ ಎಂದು ತಾನು ಬಿಜೆಪಿಯಲ್ಲಿದ್ದಾಗಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಬಿಜೆಪಿಗೆ ಸವಾಲ್:
ಈಗಾಗಲೇ ಐದು ಜನ ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆ ಐವರನ್ನು ನಾನು ಕಾಂಗ್ರೆಸ್ಗೆ ತರದೇ ಇದ್ದರೆ ನನ್ನ ಹೆಸರು ಬೇಳೂರು ಗೋಪಾಲಕೃಷ್ಣ ಅಲ್ಲವೇ ಅಲ್ಲ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೂ ಹಾಗೂ ಸಿಎಂಗೂ ವಿಷಯ ತಿಳಿಸಿದ್ದೇನೆ ಎಂದು ಬಿಜೆಪಿಗೆ ಸವಾಲ್ ಹಾಕಿದ್ದಾರೆ.
ಶೋಭಾಗೆ ತಿರುಗೇಟು:
ಶೋಭಾ ಕರಂದ್ಲಾಜೆ ಬೇಳೂರು ಗೋಪಾಲಕೃಷ್ಣ ಸಣ್ಣ ವ್ಯಕ್ತಿ ಎಂದು ಹೇಳಿದ್ದರು. ಹೌದು.. ನಾನು ಸಣ್ಣ ವ್ಯಕ್ತಿಯೇ ಆಗಲಿ. ಯಡಿಯೂರಪ್ಪ ಅವರಂತೆ ಭ್ರಷ್ಟಾಚಾರ ಮಾಡಿದ್ರೆ ಎಲ್ಲೋ ಹೋಗ್ತಿದ್ದೆ. ನಾವೆಲ್ಲ ಸೇರಿ ನಿಮಗೆ ಎಂ.ಎಲ್.ಸಿ. ಮಾಡಿದ್ದೆವು. ನಿಮ್ಮ ಬಗ್ಗೆ ನಾನು ಬಿಚ್ಚಿಟ್ರೆ, ನೀವು ತಲೆ ತಗ್ಗಿಸಬೇಕಾಗುತ್ತದೆ. ಎಲ್ಲರೂ ಸಣ್ಣ ಮಟ್ಟದಿಂದಲೇ ಎತ್ತರಕ್ಕೆ ಬೆಳೆಯುತ್ತಾರೆ ಎಂದು ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv