ಬಳ್ಳಾರಿ: ಎನ್ಆರ್ಸಿ ಜಾರಿ ಆದ ಬಳಿಕವೂ ಅಲ್ಲಲ್ಲಿ ಕೆಲ ವಿರೋಧಿಗಳು ಗೋಡೆಗಳ ಮೇಲೆ ಎನ್ಆರ್ಸಿ ವಿರೋಧಿ ಬರಹಗಳನ್ನು ಬರೆಯುವ ಮೂಲಕ ವಿರೋಧ ತೋರಿದ್ದಾರೆ.
ಅದೇ ರೀತಿಯಲ್ಲಿ ಬಳ್ಳಾರಿಯ ಸರ್ಕಾರಿ ಕಚೇರಿಯ ಗೋಡೆಯ ಮೇಲೆ ಬಾಯ್ಕಟ್ ಎನ್ಆರ್ಸಿ, ಎನ್ಪಿಆರ್ ಎಂದು ಅನಾಮಧೇಯ ವ್ಯಕ್ತಿಗಳು ಬರೆದಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇರುವ ಐಟಿಐ ಕಾಲೇಜು ಕಾಂಪೌಂಡ್ ಗೋಡೆಯ ಮೇಲೆ ಈ ಬರಹ ಬರೆದಿದ್ದಾರೆ.
ಮಂಗಳವಾರ ರಾತ್ರಿ ಈ ಬರಹವನ್ನು ಯಾರೋ ಕಿಡಗೇಡಿಗಳು ಬರೆದಿದ್ದಾರೆ. ಬಳಿಕ ವಿಷಯ ತಿಳಿದ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಗೋಡೆ ಬರಹವನ್ನು ಅಳಿಸಿ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಎರಡು ದಿನಗಳ ಹಿಂದೆ ಹುಬ್ಬಳ್ಳಿಯಲ್ಲೂ ಇದೇ ರೀತಿ ಬರೆಯಲಾಗಿತ್ತು, ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಯಾರೋ ದುಷ್ಕರ್ಮಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಬರೆದಿದ್ದರು. ಕೈ ಬರಹದಿಂದಲೇ ಬರೆದಿರುವ ಬರಹಗಳಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ದೂರು ನೀಡಿತ್ತು.