ಬೆಳಗಾವಿ: ಇನ್ನೂ ಮೂರ್ನಾಲ್ಕು ದಿನಗಳ ಕಾಲ ಬೆಳಗಾವಿ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ತಹಶೀಲ್ದಾರ್ ಅಕೌಂಟ್ನಲ್ಲಿ ಹಣ ಇದ್ದು ತುರ್ತು ಪರಿಹಾರಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂದು ಡಿ.ಸಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಗೆ 69 ಸಾವಿರ ಕ್ಯೂಸೆಕ್ನಷ್ಟು ನೀರು ಹರಿದು ಬರುತ್ತಿದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ ಕೇವಲ ಶೇ. 22ರಷ್ಟು ನೀರು ಸಂಗ್ರಹವಾಗಿದೆ. ಕೋಯ್ನಾ ಅಥವಾ ಮಹಾರಾಷ್ಟ್ರದ ಯಾವುದೇ ಡ್ಯಾಂನಿಂದ ನೀರು ಬಿಡುತ್ತಿಲ್ಲ. ಮಳೆ ಎಷ್ಟು ಆಗಿದೆಯೋ ಆ ನೀರು ಮಾತ್ರ ಬರುತ್ತಿದೆ. ಹಿಡಕಲ್ ಜಲಾಶಯದಲ್ಲಿ ಕೇವಲ ಶೇ. 17.5ರಷ್ಟು ನೀರು ಸಂಗ್ರಹವಾಗಿದೆ. ನವಿಲುತೀರ್ಥ ಜಲಾಶಯದಲ್ಲಿ ಶೇ. 34ರಷ್ಟು ನೀರು ಸಂಗ್ರಹವಾಗಿದೆ. ಎಷ್ಟೇ ನೀರು ಒಳಹರಿವು ಬಂದರೂ ಡ್ಯಾಂಗಳಲ್ಲಿ ಸಂಗ್ರಹ ಸಾಮರ್ಥ್ಯ ಇದೆ. ಮಾರ್ಕಂಡೇಯ ಜಲಾಶಯದಲ್ಲೂ ಶೇ. 36ರಷ್ಟು ನೀರು ಸಂಗ್ರಹವಿದೆ. ಸದ್ಯದ ಮಟ್ಟಿಗೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ತುಂಬಾ ಮಳೆ ಬಂದ್ರೆ, ಡ್ಯಾಂನಿಂದ ನೀರು ಬಿಟ್ರೆ ಸಮಸ್ಯೆ ಆಗಬಹುದು ಎಂದರು. ಇದನ್ನೂ ಓದಿ: ಮಳೆ ಅಬ್ಬರಕ್ಕೆ ತುಂಡಾದ ರಸ್ತೆ, ಕುಸಿಯುವ ಹಂತದಲ್ಲಿ ಮನೆ- ಮಲೆನಾಡಿಗರು ಹೈರಾಣು
ಕರ್ನಾಟಕ, ಮಹಾರಾಷ್ಟ್ರ ನೀರಾವರಿ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 37 ಮನೆಗಳು ಭಾಗಶಃ ಹಾನಿಯಾಗಿವೆ. ಖಾನಾಪುರ ತಾಲೂಕಿನಲ್ಲಿ ಒಂದು ಶಾಲೆಗೆ ಹಾನಿಯಾಗಿದೆ. ಎರಡು ಹೆಕ್ಟೇರ್ ಪ್ರದೇಶದಲ್ಲಿ ಬಾಳೆಹಣ್ಣು, ತರಕಾರಿ ಬೆಳೆ ನಾಶವಾಗಿದೆ. ಸಿಎಂ ಸಹ ಎಲ್ಲರಿಗೂ ಅಲರ್ಟ್ ಆಗಲು ಹೇಳಿದ್ದಾರೆ. ಈಗಾಗಲೇ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡ ನಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಹೆಚ್ಚಾದರೆ ಸಮಸ್ಯೆ ಆಗುತ್ತದೆ. ಹೋದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಡ್ಯಾಂ ಸ್ಟೋರೇಜ್ ಇದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ