ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಮತ್ತು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಬೆಳಗಾವಿ ಜಿಲ್ಲೆಯ 13 ಸೇತುವೆಗಳು ಜಲಾವೃತವಾಗಿದ್ದು, ಕೆಲವು ಗ್ರಾಮಗಳಲ್ಲಿ ಸಂಚಾರ ಸ್ಥಗಿತವಾಗಿದೆ.
ಬೆಳಗಾವಿ ಜಿಲ್ಲೆಯ ಕೆಳಹಂತದ 13 ಸೇತುವೆಗಳು ಜಲಾವೃತವಾಗಿದ್ದು, ಅದರಲ್ಲಿ ಪ್ರಮುಖವಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ ಸೇತುವೆ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಭೋಜವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿಮಶಿ, ಮಮದಾಪೂರ-ಹುನ್ನರಗಿ, ಕುನ್ನೂರ-ಬಾರವಾಡ ಸೇತುವೆ ಹಾಗೂ ಗೋಕಾಕ್ ತಾಲೂಕಿನ ಗೋಕಾಕ್-ಶಿಂಗಳಾಪೂರ ಸೇತುವೆ, ರಾಯಬಾಗ ತಾಲೂಕಿನ ಚಿಂಚಲಿ-ರಾಯಬಾಗ ಸೇತುವೆ, ಹುಕ್ಕೇರಿ ತಾಲೂಕಿನ ಮೊದಗೆ-ಮರಣಹೋಳ ಸೇತುವೆ, ಮೂಡಲಗಿ ತಾಲೂಕಿನ ಅವರಾದಿ-ನಂದಗಾಂವ, ಸುಣದೋಳಿ-ಮೂಡಲಗಿ ಸೇತುವೆಗಳು ಜಲಾವೃತವಾಗಿದೆ. ಇದನ್ನೂ ಓದಿ: ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್ಗೆ ಮೆಸೇಜ್ ಮಾಡಿದ್ದ ಮಸ್ಕ್
ಪ್ರವಾಹ ಭೀತಿ
ಬೆಳಗಾವಿ ಜಿಲ್ಲೆಯಲ್ಲೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಸಪ್ತನದಿಗಳ ಒಳಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿಗೆ 1 ಲಕ್ಷ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಒಳಹರಿವು ಹರಿದುಬರುತ್ತಿದೆ.
ಇತ್ತ ಮಲಪ್ರಭಾ ನದಿಗೆ 14 ಸಾವಿರ ಕ್ಯೂಸೆಕ್ ಹಾಗೂ ಘಟಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಗೋಕಾಕ್, ಮೂಡಲಗಿ ಹಾಗೂ ರಾಮದುರ್ಗ ತಾಲೂಕು ಸೇರಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.