ಬೆಂಗಳೂರು: ಹೇಳುವುದೊಂದು ಮಾಡೋದು ಮತ್ತೊಂದು ಎಂಬ ಮಾತಿಗೆ ಬಿಬಿಎಂಪಿ ಮಾಡುವ ಕೆಲಸ ಸರಿಯಾಗಿ ಹೋಲಿಕೆಯಾಗುತ್ತದೆ. ಎಲ್ಲರಿಗೂ ಕನ್ನಡ ಕಡ್ಡಾಯ, ನಾಮಫಲಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕೆಂದು ಹೇಳುವ ಪಾಲಿಕೆಯೇ ಇಂಗ್ಲಿಷ್ನಲ್ಲಿ ನೋಟಿಸ್ ಕೊಟ್ಟು ಎಡವಟ್ಟು ಮಾಡಿದೆ.
ಅಕ್ರಮ ಮಳಿಗೆಗಳ ತೆರವಿಗೆ ಕೆ.ಆರ್ ಮಾರುಕಟ್ಟೆಯಲ್ಲಿ ನೋಟಿಸ್ ನೀಡುವಾಗ ಬಿಬಿಎಂಪಿ ಎಡವಟ್ಟು ಮಾಡಿದೆ. ಇಂಗ್ಲಿಷ್ನಲ್ಲಿ ಪತ್ರ ಬರೆದು ಈಗ ಆಕ್ಷೇಪಕ್ಕೆ ಸಿಲುಕಿದೆ. ವೆಸ್ಟ್ ಸಹಾಯಕ ಕಂದಾಯಾಧಿಕಾರಿಗೆ ನೋಟಿಸ್ ನೀಡುವಾಗ ಇಡೀ ಪತ್ರವನ್ನ ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಒಂದೆಡೆ ಜನರಿಗೆ ಕನ್ನಡದ ಪಾಠ ಮಾಡೋ ಪಾಲಿಕೆ ಈಗ ತಾನೇ ತಪ್ಪು ಮಾಡಿ ಪೇಚಿಗೆ ಸಿಲುಕಿದೆ.
ಈ ಹಿಂದೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವ ವಿಚಾರವಾಗಿ ಎಫ್ಕೆಸಿಸಿಐ(ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಬಿಬಿಎಂಪಿಗೆ ಪತ್ರ ಬರೆದಿತ್ತು. ಸದ್ಯ ಸಿಲಿಕಾನ್ ಸಿಟಿಯಲ್ಲಿ 10 ಸಾವಿರ ಕೈಗಾರಿಕೋದ್ಯಮ ಮತ್ತು 20 ಸಾವಿರ ವ್ಯಾಪಾರೋದ್ಯಮಿಗಳು ಈ ನಿಯಮಕ್ಕೆ ಒಳಪಡಲಿದ್ದಾರೆ. ಹೀಗಾಗಿ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಏಪ್ರಿಲ್ 30ರವರೆಗೂ ಸಮಯಾವಕಾಶ ಬೇಕಾಗಿದೆ ಎಂದು ಬಿಬಿಎಂಪಿಗೆ ಎಫ್ಕೆಸಿಸಿಐ ಪತ್ರದಲ್ಲಿ ತಿಳಿಸಿತ್ತು.
ಪತ್ರದಲ್ಲಿ ಸಮಯಾವಕಾಶದ ಜೊತೆಗೆ ಬಿಬಿಎಂಪಿಗೆ ಚುರುಕು ಸಹ ಮುಟ್ಟಿಸಿತ್ತು. ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ, ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ, ಕಳಪೆ ಕಾಮಗಾರಿ ಒತ್ತಡ, ಮಳೆ ನೀರು ನಿರ್ವಹಣೆ ಹೀಗೆ ಸಮಸ್ಯೆಗಳ ಪಟ್ಟಿ ಮಾಡಿ, ಇದನ್ನು ಬಿಬಿಎಂಪಿ ಸೂಕ್ತವಾಗಿ ನಿರ್ವಹಿಸಬೇಕಾಗಿದೆ. ಅಲ್ಲದೆ ಬಿಬಿಎಂಪಿ ಕನ್ನಡ ನಾಮಫಲಕ ಅಳವಡಿಕೆ ಹೆಸರಲ್ಲಿ ಕಿರುಕುಳ ಸೃಷ್ಟಿಸಬಾರದೆಂದು ಎಫ್ಕೆಸಿಸಿಐ ಪತ್ರದಲ್ಲಿ ಉಲ್ಲೇಖಿಸಿತ್ತು.