ಬೆಳಗಾವಿ: ಕಳೆದ ಸರ್ಕಾರದ ಮಂತ್ರಿಗಳು ಕೇವಲ ಜನರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಅದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗಾವಿಯ ಸುವರ್ಣ ಸೌಧದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಸಚಿವೆ ಜಯಮಾಲಾ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ನಿಮ್ಮ ಪರ 4 ಮುಖಂಡರು ಕೂಡ ಮನವಿಯೊಂದಿಗೆ ಬನ್ನಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡೋಣ ಎಂದು ಆಶ್ವಾಸನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರದ ಸಚಿವರು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಬೇಕು. ಆದರೆ ಕಳೆದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಕೇವಲ ಆಶ್ವಾಸನೆ ಕೊಟ್ಟಿದ್ದಾರೆ ಅಷ್ಟೇ. ಮಾಜಿ ಸಚಿವೆ ಉಮಾಶ್ರೀ ಅವರು ಕೂಡ ಆಶ್ವಾಸನೆ ಕೊಟ್ಟು ಹೋದರು ಎಂದು ಪರೋಕ್ಷವಾಗಿ ಈ ಹಿಂದಿನ ಕಾಂಗ್ರೆಸ್ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದರು.
ಸಚಿವ ಸ್ಥಾನ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ಪಡೆಕೊಳ್ಳಲು ನನ್ನ ಬಳಿ ಏನೂ ಇಲ್ಲಾ ಪಕ್ಷದ ವರಿಷ್ಠರಾದ ದೇವಗೌಡ ಹಾಗೂ ಕುಮಾರಸ್ವಾಮಿ ಅವರ ಬಳಿ ಇದೆ. ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ಅದ್ದರಿಂದ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಈಗಿನ ರಾಜಕೀಯ ವ್ಯವಸ್ಥೆಯೇ ಸರಿಯಾಗಿಲ್ಲ ಎಂದರು. ಬಳಿಕ ಕುಮಾರಸ್ವಾಮಿ ಮಧ್ಯ ಪ್ರದೇಶ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಕೂಡ ಅನೇಕ ಬಾರಿ ಸದನ ತಪ್ಪಿಸಿ ಹೋಗಿದ್ದಾರೆ. ಅದರಂತೆ ಸಿಎಂ ಕುಮಾರಸ್ವಾಮಿ ಸದನ ತಪ್ಪಿಸಿ ಹೋಗಿದ್ದು ತಪ್ಪೇನಿಲ್ಲ. ಆದರೆ ಪದೇ ಪದೇ ಇದು ಪುನರಾವರ್ತನೆ ಆಗಬಾರದು ಅಷ್ಟೇ ಎಂದರು.
ಬೆಳಗಾವಿಯಲ್ಲಿ ಅಧಿವೇಶನ ಇನ್ನೂ ಎರಡು ದಿನ ನಡೆಯಬೇಕು ಎಂಬ ಆಸೆ ನನಗೂ ಇದೆ. ಸದನ ಆರಂಭದಲ್ಲೇ ನಾನು ಈ ಕುರಿತು ಚರ್ಚೆ ನಡೆಸಿದ್ದೆ. ಆದರೆ ನನ್ನ ಮಾತು ಯಾರು ಕೇಳುತ್ತಿಲ್ಲ ಎಂದು ತಮ್ಮ ಅಸಹಾಯಕತೆ ಹೊರ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv