ಬೆಂಗಳೂರಿನ (Bangalore) 14ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (Film Festival) ನಿನ್ನೆ ತೆರೆ ಬಿದ್ದಿದೆ. ಚಿತ್ರೋತ್ಸವದ ಕೊನೆಯ ದಿನ ಸ್ಪರ್ಧೆಯಲ್ಲಿದ್ದ ಮೂರು ವಿಭಾಗಗಳಿಗೆ ಪ್ರಶಸ್ತಿಯನ್ನು (Awards) ಘೋಷಿಸಲಾಗಿದೆ. ಸಮಾರೋಪ ಸಮಾರಂಭಕ್ಕೂ ಒಂದು ದಿನ ಮುಂಚೆಯೇ ಫೇಸ್ ಬುಕ್ ನಲ್ಲಿ ಹಲವು ಸಿನಿಮಾಗಳಿಗೆ ಪ್ರಶಸ್ತಿ ಬಂದಿದೆ ಎಂದೂ, ಅವುಗಳನ್ನು ದುಡ್ಡು ಪಡೆದು ಪಡೆಯಲಾಗಿದೆ ಎಂದು ಭಾರೀ ಚರ್ಚೆ ನಡೆದಿತ್ತು. ಆ ಚರ್ಚೆಯಲ್ಲಿ ಕಂಡಂತಹ ಸಿನಿಮಾಗಳಿಗೂ ಪ್ರಶಸ್ತಿ ನೀಡಲಾಗಿದೆ. ಹಾಗಾಗಿ ಪ್ರಶಸ್ತಿಯ ಪಾರದರ್ಶಕತೆಯ ಬಗ್ಗೆಯೂ ಮಾತನಾಡಲಾಗುತ್ತಿದೆ.
ಚರ್ಚೆಗಳಾಚೆ ಏನೇ ಇದ್ದರೂ ಮೂರು ವಿಭಾಗಗಳಲ್ಲಿ ನಿನ್ನೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ನಿನ್ನೆಯೇ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವನ್ನೂ ಮಾಡಲಾಗಿದೆ. ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರೆ, ಇಂಡೋನೇಷ್ಯಾದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಇರಾನ್ ನ ‘ಮದರ್ ಲೆಸ್’ ಚಿತ್ರಗಳು ಏಷ್ಯನ್ ವಿಭಾಗದಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿವೆ.
ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಕೃಷ್ಣೆಗೌಡ ನಿರ್ದೇಶನದ ‘ನಾನು ಕುಸುಮಾ’ ಪ್ರಶಸ್ತಿ ಬಾಚಿಕೊಂಡರೆ, ಅತ್ಯುತ್ತಮ ದ್ವಿತೀಯ ಚಿತ್ರವಾಗಿ ಪೃಥ್ವಿ ಕೊಣನೂರು ನಿರ್ದೇಶನದ ‘ಹದಿನೇಳೆಂಟು’, ಅತ್ಯುತ್ತಮ ತೃತೀಯ ಚಿತ್ರವಾಗಿ ಉತ್ಸವ್ ಗೋನಾವರ್ ಅವರ ‘ಫೋಟೋ ‘ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದನ್ನೂ ಓದಿ: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ನ್ಯೂಸ್; ಮಾ.31 ರಿಂದ IPL ಧಮಾಕ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಚಿತ್ರ ಭಾರತಿ –ಭಾರತೀಯ ಚಿತ್ರ ವಿಭಾಗದಲ್ಲಿ ಚಂಪಾ ಶೆಟ್ಟಿ ನಿರ್ದೇಶನದ ಕನ್ನಡದ ‘ಕೋಳಿ ಎಸ್ರು’ ಅತ್ಯುತ್ತಮ ಚಿತ್ರವಾಗಿ, ತರುಣ್ ಮೂರ್ತಿ ಅವರ ಮಲಯಾಳಂ ಸಿನಿಮಾ ‘ಸೌದಿ ವೆಲ್ಲಕ ಸಿಸಿ’ ಸಿನಿಮಾ ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಗೌತಮ್ ರಾಮಚಂದ್ರನ್ ನಿರ್ದೇಶನದ ತಮಿಳು ಸಿನಿಮಾ ‘ಗಾರ್ಗಿ’ ಅತ್ಯುತ್ತಮ ತೃತೀಯ ಚಿತ್ರ ಪ್ರಶಸ್ತಿಯನ್ನು ಪಡೆದವು.
ಏಷ್ಯನ್ ವಿಭಾಗದಲ್ಲಿ ಇಂಡೋನೇಷ್ಯಾದ ಕಮಿಲಾ ಅಂದಿನಿ ನಿರ್ದೇಶನದ ‘ಬಿಫೋರ್ ನೌ ಅಂಡ್ ದೆನ್’ ಹಾಗೂ ಸಯ್ಯದ್ ಮೊರ್ತೆಜಾ ಫೆತಮಿ ನಿರ್ದೇಶನದ ಇರಾನ್ ಸಿನಿಮಾ ‘ಮದರ್ ಲೆಸ್’ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿವೆ. ವಿಶಕೆಸ್ ಚಂದ್ರಶೇಖರಮ್ ನಿರ್ದೇಶನದ ಶ್ರೀಲಂಕಾ ಚಿತ್ರ ‘ಸ್ಯಾಂಡ್’ ಅತ್ಯುತ್ತಮ ದ್ವಿತೀಯ ಚಿತ್ರವಾಗಿ, ಅಕ್ರಂ ಖಾನ್ ನಿರ್ದೇಶನದ ಬಾಂಗ್ಲಾದೇಶದ ‘ಎ ಟೇಲ್ ಆಫ್ ಟು ಸಿಸ್ಟರ್’ ಹಾಗೂ ಬಿ.ಎಸ್.ಲಿಂಗದೇವರು ನಿರ್ದೇಶನದ ಕನ್ನಡದ ‘ವಿರಾಟಪುರ ವಿರಾಗಿ’ ಸಿನಿಮಾ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ವಿಧಾನಸೌಧದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ವಾರ್ತಾ ಇಲಾಖೆಯ ನಿರ್ದೇಶಕ ಡಿ.ಪಿ. ಮುರಳಿಧರ್, ಆಯುಕ್ತ ಪಿ.ಎಸ್. ಹರ್ಷ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನವನ್ನು ಮಾಡಿದರು.