– ಕ್ಷೇತ್ರದ ಜನರೇ ನನಗೆ ದೇವರಿದ್ದಂತೆ
ಬಾಗಲಕೋಟೆ: ನಮ್ಮ ತಂದೆಯೂ ಕೂಡ ಕಾಂಗ್ರೆಸ್ಸಿನಲ್ಲಿದ್ದರು. ನಾನು ಸಹ ಪಕ್ಷದಲ್ಲೇ ಇರುತ್ತೇನೆ. ಕಾಂಗ್ರೆಸ್ ಬಿಡಲ್ಲ ಎಂದು ದಿವಂಗತ ಸಿದ್ದು ನ್ಯಾಮಗೌಡ ಅವರ ಪುತ್ರ ಹಾಗೂ ಜಮಖಂಡಿ ಕೈ ಶಾಸಕ ಆನಂದ್ ನ್ಯಾಮಗೌಡ ರಾಜೀನಾಮೆ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ. ಯಾವ ಆಧಾರದ ಮೇಲೆ ನನ್ನ ಹೆಸರನ್ನು ಇದರಲ್ಲಿ ಬಹಿರಂಗ ಪಡಿಸಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಮೂರು ದಿನಗಳಿಂದ ಬಿಜೆಪಿ ಶಾಸಕರು ನನನ್ನು ಸಂಪರ್ಕ ಮಾಡುತ್ತಿದ್ದಾರೆ. ಆದರೆ ಅವರ ಹೆಸರನ್ನು ನಾನು ಬಹಿರಂಗ ಪಡಿಸಲ್ಲ. ಜನರ ಆಶೀರ್ವಾದದಿಂದ ಮೊದಲ ಬಾರಿಯೇ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ರಾಜೀನಾಮೆ ನೀಡಿ ಜನರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಲ್ಲ ಎಂದು ತಿಳಿಸಿದರು.
ನಮ್ನ ತಂದೆಯೂ ಕಾಂಗ್ರೆಸ್ನಲ್ಲಿಯೇ ಇದ್ದರು. ನಾನೂ ಕಾಂಗ್ರೆಸ್ನಲ್ಲಿಯೇ ಇರುತ್ತೇನೆ. ನಮ್ಮ ತಂದೆಯ ಹೆಸರು ಉಳಿಸಲು ರಾಜಕೀಯಕ್ಕೆ ಬಂದಿದ್ದೇನೆ. ಅವರ ಹೆಸರಿಗೆ ಕಪ್ಪು ಚುಕ್ಕೆ ತರಲು ಬಂದಿಲ್ಲ. ಇದರಲ್ಲಿ ಯಾವುದೇ ಸಂಶಯವಿಲ್ಲ. ನನ್ನನ್ನು ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕ್ಷೇತ್ರದ ಜನರೇ ನನಗೆ ದೇವರಿದ್ದಂತೆ ಎಂದು ಹೇಳಿದರು.