ಯಾದಗಿರಿ: ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಮೇಲ್ಛಾವಣಿ ಕುಸಿದ ಪರಿಣಾಮ ಮಗು ಸಾವನ್ನಪ್ಪಿರೋ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪುರ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಡಾ.ವೆಂಕಟೇಶ ಶಿರವಾಳಕರ್ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿರುವ ಉತ್ತರಾಖಂಡ್ ಮೂಲದ ವಿಜಯಪ್ರಕಾಶ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 30 ವರ್ಷ ಹಳೆಯದಾದ ಮನೆಯ ಮೇಲ್ಛಾವಣಿ ಸ್ಪಲ್ಪ ಭಾಗ ಮಗುವಿನ ತಲೆ ಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಬಾಲಕ ಪ್ರಿಯಾನಸೂ ಮೃತಪಟ್ಟಿದ್ದಾನೆ.
ಘಟನೆ ನಡೆದ ವೇಳೆ ತಂದೆ ವಿಜಯಪ್ರಕಾಶ್ ಹೊರಗಡೆ ಕೆಲಸಕ್ಕೆ ತೆರಳಿದ್ದರು. ತಾಯಿ ಇಂದುಮತಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮೇಲ್ಛಾವಣಿ ಮಗುವಿನ ಮೇಲೆ ಕುಸಿದ ಬಳಿಕ ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದ್ರೆ ಚಿಕಿತ್ಸೆ ಫಲಿಸದೇ ತಾಲೂಕು ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.