ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅವತಾರ್ 2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾಗಾಗಿ ಟಿಕೆಟ್ ದರವನ್ನೂ ಏರಿಸಿದ್ದರಿಂದ, ಸಾವಿರಾರು ಕೋಟಿ ರೂಪಾಯಿ ಹರಿದು ಬಂದಿದೆ. ಭಾರತದಲ್ಲೇ ಮೂರು ದಿನಕ್ಕೆ 150 ಕೋಟಿಯಿಂದ 165 ಕೋಟಿವರೆಗೂ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೊದಲ ಮೂರು ದಿನಗಳ ಬಹುತೇಕ ಟಿಕೆಟ್ ಮಾರಾಟವಾಗಿತ್ತು ಎನ್ನುತ್ತಿದೆ ಬಾಕ್ಸ್ ಆಫೀಸ್ ರಿಪೋರ್ಟ್.
ವೀಕೆಂಡ್ ಹೊರತಾಗಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಕೂಡ ಅನೇಕ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ನಡೆಸಿವೆಯಂತೆ. ಭಾರತೀಯ ನಾನಾ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದರಿಂದ ಮತ್ತು 3ಡಿಯಲ್ಲೂ ಸಿನಿಮಾ ರಿಲೀಸ್ ಆಗಿದ್ದರಿಂದ, ಹೆಚ್ಚಿನ ಪ್ರಮಾಣದಲ್ಲೇ ಬಾಕ್ಸ್ ಆಫೀಸಿಗೆ ಹಣ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. 2009ರಲ್ಲಿ ಅವತಾರ ಸಿನಿಮಾ ತೆರೆಕಂಡಾಗಲೂ ಇಷ್ಟೇ ಸಂಭ್ರಮದಿಂದಲೇ ಅಭಿಮಾನಿಗಳು ಚಿತ್ರವನ್ನು ಬರಮಾಡಿಕೊಂಡಿದ್ದರು. ಇದನ್ನೂ ಓದಿ: ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಈ ನಡುವೆ ಅಹಿತಕರ ಘಟನೆಯೊಂದು ನಡೆದಿದೆ. ಸಿನಿಮಾ ನೋಡುತ್ತಲೇ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿ ಸಹೋದರ ರಾಜು ಜೊತೆ ಲಕ್ಷ್ಮಿರೆಡ್ಡಿ ಶ್ರೀನು ಎಂಬಾತ ಬಂದಿದ್ದ. ಸಿನಿಮಾ ನೋಡುತ್ತಾ, ಮೈಮರೆತಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಕೂಡ ಆಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ತೀವ್ರ ರಕ್ತದೊತ್ತಡದ ನಂತರ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವತಾರ್ ಸಿನಿಮಾ ನೋಡುವ ವೇಳೆಯಲ್ಲಿ ಈ ರೀತಿಯ ಘಟನೆಗಳು ಹಿಂದೆಯೇ ನಡೆದಿವೆ. ಅವತಾರ್ ಮೊದಲ ಭಾಗ ಬಂದಾಗ ತೈವಾನ್ ನಲ್ಲಿಯೂ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದ. ಇದು ಕೇವಲ ಕಾಕತಾಳೀಯವಾದರೂ, ಪ್ರೇಕ್ಷಕರಲ್ಲಿ ಒಂದು ರೀತಿಯಲ್ಲಿ ಭಯ ಹುಟ್ಟಿಸಿದ್ದು ಸುಳ್ಳು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಅವತಾರ್ ಸಿನಿಮಾ ರಿಲೀಸ್ ಆಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.