ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಡೆಲಿವರಿ ಮಾಡ್ತೀನಿ ಎಂದು ವಿವಾದಕ್ಕೆ ಗುರಿಯಾಗಿದ್ದ ರಾಜ್ಯದ ಅಬಕಾರಿ ಸಚಿವ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿರುವ ಅಬಕಾರಿ ಸಚಿವ ನಾಗೇಶ್ ವರ್ಷದ ಕಡೆ ದಿನ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇಟ್ಟಿದ್ದಾರೆ. ಬಡವರಿಗೆ ಮದ್ಯವನ್ನು ಸಬ್ಸಿಡಿ ದರದಲ್ಲಿ ಸರ್ಕಾರ ಕೊಡಲು ಚಿಂತಿಸಿದೆ ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಡ ಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಬ್ಸಿಡಿ ದರದಲ್ಲಿ ಕೊಡಬೇಕಂದು ಸರ್ಕಾರದ ಚಿಂತನೆ ಇದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಅಂದಹಾಗೆ ನಾಗೇಶ್ ಹೇಳಿಕೆ ವೈಯಕ್ತಿಕವಾಗಿ ಕೊಟ್ಟಿರೋದಾ? ಸರ್ಕಾರ ಮಟ್ಟದಲ್ಲಿ ನಡೆದಿರುವ ಬೆಳವಣಿಗೆನಾ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಈ ಹಿಂದೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುತ್ತೇವೆ, ಹೋಮ್ ಡೆಲಿವರಿ ಇದೆ ಎಂದಿದ್ದರು.
ನಾಗೇಶ್ ಹೋಮ್ ಡೆಲಿವರಿ ಹೇಳಿಕೆ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ಹೋಮ್ ಡೆಲಿವರಿ ಚಿಂತನೆ ಇಲ್ಲ ಎಂದು ಹೇಳಿ ವಿವಾದ ತಿಳಿಗೊಳಿಸಿದ್ದರು. ಈಗ ಮತ್ತೆ ಸಬ್ಸಿಡಿ ದರದಲ್ಲಿ ಮದ್ಯ ನೀಡುತ್ತೇವೆ ಎನ್ನುವ ಹೇಳಿಕೆ ವಿವಾದಕ್ಕೆ ತಿರುಗಿದ್ದು, ಯಡಿಯೂರಪ್ಪ ಅಬಕಾರಿ ಸಚಿವರ ಚಿಂತನೆಗೆ ಓಕೆ ಅಂತಾರಾ? ತಿರಸ್ಕರಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.