ಲಕ್ನೋ: ಯೋಗಿ ಆದಿತ್ಯನಾಥ್ ಸರ್ಕಾರವನ್ನು ಜನರೇ ಬಲ್ಡೋಜರ್ನಿಂದ ಕಿತ್ತೆಸೆಯುವ ದಿನ ಬರಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಲ್ಡೋಜರ್ಗಳಿಂದ ಕಟ್ಟಡಗಳನ್ನು ನೆಲಸಮ ಮಾಡುವ ಮೂಲಕ ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗದಂತಹ ಗಂಭೀರ ಸಮಸ್ಯೆಗಳ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರಿಗೆ ದೇಶದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಕಾರಣ ಬುಲ್ಡೋಜರ್ಗಳಿಂದ ಕಟ್ಟಡಗಳನ್ನು ನೆಲಸಮ ಮಾಡುವುದು ಕಾನೂನುಬಾಹಿರವಾಗಿದೆಯೇ ಇಲ್ಲವೇ ಎಂದು ಯೋಚಿಸುತ್ತಿಲ್ಲ ಎಂದು ಕಿಡಿಕಾರಿದರು.
ಭಾರತವು ವಸುದೈವ ಕುಟುಂಬಕಂನ್ನು ನಂಬುತ್ತದೆ, ಆದರೆ ಬಿಜೆಪಿ ಸರ್ಕಾರವು ಭಾರತದ ಈ ಗುರುತನ್ನೇ ಸಂಪೂರ್ಣವಾಗಿ ಅಳಿಸಿ ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯುವಕನ ಕಣ್ಣಿನಲ್ಲಿದ್ದ ಹುಳ ಹೊರ ತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು
ದಶಕಗಳಿಂದ ಒಟ್ಟಿಗೆ ವಾಸಿಸುತ್ತಿದ್ದ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ. ನೆಲಸಮಗೊಳಿಸಿದ ಕುಟುಂಬದವರ ಪರಿಸ್ಥಿತಿಯೇನು. ಅವರಿಗೆ ನ್ಯಾಯವನ್ನು ಯಾರು ನೀಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬಿಜೆಪಿ ಸರ್ಕಾರದಲ್ಲಿ ಅನ್ಯಾಯವೇ ಮೇಲುಗೈ ಸಾಧಿಸುತ್ತಿದೆ. ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಈ ಅನ್ಯಾಯಕ್ಕೆ ಉತ್ತರ ನೀಡಲು ಜನತೆ ಕೂಡ ಮನಸ್ಸು ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ