ಮಡಿಕೇರಿ: ಕೊಟ್ಟ ಹಣ (Money) ವಾಪಾಸ್ ಕೇಳಿದ್ದಕ್ಕೆ ನಕಲಿ ಫೇಸ್ಬುಕ್ ಖಾತೆಯಲ್ಲಿ ಮಹಿಳೆಯೊಬ್ಬಳ ತೇಜೋವಧೆ ಮಾಡಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೌಷದ್ (30) ಎಂದು ಗುರುತಿಸಲಾಗಿದೆ. ಆರೋಪಿ ಇಲ್ಲ ಸಲ್ಲದ ಆರೋಪ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಕಳೆದ ಆರು ತಿಂಗಳ ಹಿಂದೆ ಕೊಡಗಿನ (Kodagu) ಅನ್ಯಕೋಮಿನ ಮಹಿಳೆಗೆ ಪರಿಚಯವಾದ ನೌಷದ್ ಹಿಂದೂ ಎಂದು ಪರಿಚಯಿಸಿಕೊಂಡು ಆಕೆಯ ಮೊಬೈಲ್ ನಂಬರ್ ಪಡೆದಿದ್ದಾನೆ. ಬಳಿಕ ಪ್ರತಿನಿತ್ಯ ಮೆಸೇಜ್ ಮಾಡುತ್ತಿದ್ದ. ನಂತರ ಆಕೆಯ ಬಳಿ ಸಾಲವಾಗಿ ಹಣ ಪಡೆದಿದ್ದ. ಹಣವನ್ನು ಮಹಿಳೆ ವಾಪಾಸ್ ಕೇಳಿದಾಗ ಆರೋಪಿ ಆಕೆಯ ಬಗ್ಗೆ ಫೇಸ್ಬುಕ್ನಲ್ಲಿ ಇಲ್ಲಸಲ್ಲದ ಪೋಸ್ಟ್ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆದಿದ್ದೇ ಪ್ರತಿಮಾ ಕೊಲೆಗೆ ಕಾರಣವಾಯ್ತಾ? – ಹಲವು ಆಯಾಮಗಳಲ್ಲಿ ಪೊಲೀಸ್ ತನಿಖೆ
ತನಿಖೆ ವೇಳೆ ಆರೋಪಿ ಮೊದಲು ಸಾಲ ಪಡೆದು, ಅದನ್ನು ವಾಪಾಸ್ ನೀಡಿ ವಿಶ್ವಾಸ ಗಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಬಳಿಕ ಮತ್ತೆ ಹಣ ಪಡೆದು ಕೊಡಲು ಸತಾಯಿಸುತ್ತಿದ್ದ. ಅಲ್ಲದೇ ಫೇಸ್ಬುಕ್ ಖಾತೆಯಲ್ಲಿ ಆಕ್ಷೇಪಾರ್ಹ ಪದ ಬಳಸಿ ಬರೆದು ಅದನ್ನು ಮಹಿಳೆಯ ಸಂಬಂಧಿಕರಿಗೆ ಕಳಿಸುತ್ತಿದ್ದ ಎಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ ಮೊಬೈಲ್ನ್ನು ಪೊಲಿಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354(ಡಿ), 509,506 ಅಡಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಉಪನಿರ್ದೇಶಕಿ ಹತ್ಯೆ ಪ್ರಕರಣ- ವಿಚ್ಛೇದನ ಪಡೆದಿದ್ರಿಂದ ಬೆಂಗಳೂರಲ್ಲಿ ಒಂಟಿಯಾಗಿದ್ದರು ಪ್ರತಿಮಾ