ಕನಸಿನ ರಾಣಿ ಮಾಲಾಶ್ರೀ ನಾಯಕಿಯಾಗಿ ನಟಿಸಿರುವ ‘ರಾಜಾ ಕೆಂಪು ರೋಜ’ (Raja Kempu Roja) ಸಿನಿಮಾದ ನಟಿಸಿರುವ ರವಿರಾಜ್ ಗೆ ಗುಂಡು ತಗುಲಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಮನೆಯಲ್ಲಿದ್ದ ಪಿಸ್ತೂಲ್ (Pistol) ಅನ್ನು ನವೀಕರಣಕ್ಕಾಗಿ ಸ್ವಚ್ಚಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ (Gundu) ರವಿರಾಜ್ (Raviraj) ಅವರಿಗೆ ತಲೆಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ದಾವಣಗೆರೆ (Davangere) ಮೂಲದ ರವಿರಾಜ್ ಚಿನ್ನದ ವ್ಯಾಪಾರಿ ಕೂಡ ಆಗಿದ್ದಾರೆ. ಹಾಗಾಗಿ ಪರವಾಣಿಗೆ ಸಹಿತ ಪಿಸ್ತೂಲ್ ಹೊಂದಿದ್ದಾರೆ. ಎಂಸಿಸಿ ಬಿ ಬ್ಲಾಕ್ ನಿವಾಸಿ ಆಗಿರುವ ಅವರು ಬುಧವಾರ ಸಂಜೆ ಪಿಸ್ತೂಲಿನ ಲೈಸೆನ್ಸ್ ನವೀಕರಣಕ್ಕೆ ಹೋಗಬೇಕಿತ್ತು. ಹಾಗಾಗಿ ಅದನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಸಿಡಿದಿದೆ. ಹಣೆಯ ಭಾಗಕ್ಕೆ ಗುಂಡು ಹೊಕ್ಕಿದೆ. ಕೂಡಲೇ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ‘ಆಸ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್. ಸುಬ್ಬರಾವ್ ನೇತೃತ್ವದ ತಂಡವು ತುರ್ತು ಚಿಕಿತ್ಸೆ ನಡೆಸಿ, ಯಶಸ್ಸಿಯಾಗಿ ಗುಂಡು ಹೊರತಗೆಯಲಾಗಿದೆ. ತಲೆಬುರುಡೆಯ ಮೂಳೆಯಲ್ಲಿ ಗುಂಡು ಹೊಕ್ಕಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ರವಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿನಿಮಾ ರಂಗದಲ್ಲಿ ರವಿರಾಜ್ ಎಂದೇ ಗುರುತಿಸಿಕೊಂಡಿದ್ದ ಅವರು ದಾವಣಗೆರೆ ಜನತೆಗೆ ಮಂಜುನಾಥ ರೇವಣ್ಕರ್ (Manjunath Revankar) ಎಂದು ಪರಿಚಿತರು.
ಸಿನಿಮಾ ರಂಗದಲ್ಲಿ ನಟರಾಗಿ, ನಾಯಕ ನಟರಾಗಿ ನಂತರ ಒಂದು ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ. ಆನಂತರ ಸಿನಿಮಾ ರಂಗದಿಂದ ದೂರವಾಗಿ ತಮ್ಮ ವೃತ್ತಿಯಲ್ಲೇ ಮುಂದುವರೆದಿದ್ದರು. ಸಿನಿಮಾ ರಂಗದಿಂದ ದೂರವಾಗಿದ್ದರೂ, ಸಿನಿಮಾಗಳಿಂದ ಅವರು ದೂರವಾಗಿರಲಿಲ್ಲ. ಆಗಾಗ್ಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು.