ರಾಯಚೂರು: ಕಿರಿದಾದ ರಸ್ತೆಯಿಂದಾಗಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಮೇಲೆ ಬಿದ್ದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichur) ಬಿಜನಗೇರಾ ಗ್ರಾಮದಲ್ಲಿ ನಡೆದಿದೆ.
ಈರಣ್ಣ ಗೌಡ (25) ಮೃತ ಯುವಕ. ಜಮೀನಿನಲ್ಲಿ ಮಡಿಕೆ ಹೊಡೆದು ಮನೆಗೆ ಮರಳುತ್ತಿದ್ದ ವೇಳೆ ಕಿರಿದಾದ ರಸ್ತೆಯಿಂದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪಲ್ಟಿಯಾಗಿ ತಗ್ಗು ಪ್ರದೇಶಕ್ಕೆ ಉರುಳಿದ್ದು, ಸುಮಾರು 25 ಅಡಿ ಆಳಕ್ಕೆ ಬಿದ್ದಿದೆ.

ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ ಮತ್ತೋರ್ವ ಯುವಕ ಪ್ರಾಣ ತೆತ್ತಿದ್ದಾನೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬಿಜನಗೇರಾ ಗ್ರಾಮದ ಈ ಕಿರಿದಾದ ರಸ್ತೆಯಲ್ಲಿ ಅಪಘಾತ ನಡೆದಿರುವುದು ಇದೇ ಮೊದಲೇನಲ್ಲ, ಆಗಾಗ್ಗೆ ನಡೆಯುತ್ತಲೇ ಇದ್ದು ಪ್ರಾಣ ಹಾನಿಯೂ ಸಂಭವಿಸುತ್ತಿರುತ್ತದೆ. ಹಾಗಾಗಿ ಮುಖ್ಯ ರಸ್ತೆಯನ್ನ ಅಗಲೀಕರಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
