ಶಿವಮೊಗ್ಗ: ಮಧ್ಯ ಕರ್ನಾಟಕ ಭಾಗದ ಜನರ ಬಹುಕಾಲದ ಬೇಡಿಕೆಯಾದ ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ, ಸಚಿವ ಮಧು ಬಂಗಾರಪ್ಪ (Madhu Bangarappa) ನೇತೃತ್ವದಲ್ಲಿ ಶಿವಮೊಗ್ಗದ ಹಿರಿಯ ವಕೀಲರ ನಿಯೋಗವು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ `ಕೃಷ್ಣಾ’ದಲ್ಲಿ ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸಂಚಾರಿ ಪೀಠದ ಅಗತ್ಯತೆಯ ಕುರಿತು ಸುದೀರ್ಘ ಚರ್ಚೆ ನಡೆಸಿ, ಮನವಿ ಸಲ್ಲಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ‘ಹಾವಾಡಿಗ’ನಾಗಿ ಚಿತ್ರಿಸಿದ ನಾರ್ವೆ ಪತ್ರಿಕೆ – ಭಾರತೀಯರ ತೀವ್ರ ಆಕ್ರೋಶ
ಬೆಂಗಳೂರಿನಿಂದ ಸುಮಾರು 250 ರಿಂದ 300 ಕಿ.ಮೀ ದೂರದಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಜನರಿಗೆ ಸುಲಭವಾಗಿ, ಶೀಘ್ರವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ಸಿಗುವಂತಾಗಲು ಶಿವಮೊಗ್ಗದಲ್ಲಿ ಸಂಚಾರಿ ಪೀಠದ ಸ್ಥಾಪನೆ ಅತ್ಯಗತ್ಯ ಎಂದು ತಿಳಿಸಿದ್ದಾರೆ.
ನ್ಯಾ.ಜಸ್ವಂತ್ ಸಿಂಗ್ ಸಮಿತಿ ಮಾರ್ಗಸೂಚಿಗಳ ಅನ್ವಯ, ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಮಧ್ಯ ಕರ್ನಾಟಕ ಭಾಗವು ಸಂಪೂರ್ಣವಾಗಿ ಹೊಂದಿದೆ ಎಂದು ನಿಯೋಗವು ಸಿಎಂ ಗಮನ ಸೆಳೆದಿದೆ.
ಈಗಾಗಲೇ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಧಾರವಾಡ ಮತ್ತು ಕಲಬುರಗಿಗಳಲ್ಲಿ ಸಂಚಾರಿ ಪೀಠಗಳನ್ನ ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ಮಧ್ಯ ಕರ್ನಾಟಕದ ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲೂ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸಬೇಕು ಎಂದು ನಿಯೋಗವು ಸಿಎಂ ಸಿದ್ದರಾಮಯ್ಯರನ್ನ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಸಿಎಂ ಕಾನೂನು ಸಲಹೆಗಾರರಾದ ಪೊನ್ನಣ್ಣ ಮತ್ತು ಶಿವಮೊಗ್ಗ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಸಂಬಂಧಗಳನ್ನು ಸಿಹಿಗೊಳಿಸುತ್ತಿದ್ದೇವೆ – ಮೋದಿ ಕೊಟ್ಟ ‘ಮೆಲೋಡಿ’ ಟಾಫಿಗೆ ಪಾರ್ಲೆ ಫನ್ನಿ ರಿಯಾಕ್ಷನ್

