ಜೈಪುರ: 4 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದಿದೆ.
ವರದಿಗಳ ಪ್ರಕಾರ ಗೋಗುಂದ ಪಟ್ಟಣದ ಮನೆಯ ಕೊಠಡಿಯಲ್ಲಿ ಒಂದೇ ಕುಟುಂಬದ 6 ಸದಸ್ಯರ ಶವ ಪತ್ತೆಯಾಗಿದೆ. ಘಟನೆಯಲ್ಲಿ ಒಂದು ಮಗು ಹಾಗೂ ಮಹಿಳೆಯೊಬ್ಬರ ಶವ ನೆಲದ ಮೇಲೆ ಕಂಡುಬಂದರೆ ಅವರ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಉಳಿದವರ ಶವಗಳು ಸೀಲಿಂಗ್ಗೆ ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೃತರನ್ನು ಪ್ರಕಾಶ್ ಗಮೇಟಿ, ಅವರ ಪತ್ನಿ ದುರ್ಗಾ ಗೇಮೇಟಿ (27) ಮತ್ತು ಅವರ ನಾಲ್ವರು ಅಪ್ರಾಪ್ತ ಮಕ್ಕಳು ಎಂದು ಗುರುತಿಸಲಾಗಿದೆ. ಪ್ರಕಾಶ್ ಅವರ ನಿವಾಸ ಅವರ ಇಬ್ಬರು ಸಹೋದರರ ಮನೆ ಸಮೀಪದಲ್ಲಿದೆ. ಪ್ರಕಾಶ್ ಮನೆಗೆ ಭೇಟಿ ನೀಡಲು ಮುಂದಾದ ಸಹೋದರನೊಬ್ಬ ಯಾರು ಕೂಡಾ ಮನೆಯ ಗೇಟ್ ತೆಗೆಯುತ್ತಿಲ್ಲ ಎಂದು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಆತಂಕದ ನಡುವೆ ಮಂಗ್ಳೂರಿನ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ
ಪ್ರಕಾಶ್ ಗುಜರಾತ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಬಸ್ಗಳಲ್ಲಿ ಆಹಾರವನ್ನು ಮಾರಾಟ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಆತ್ಮಹತ್ಯೆ (Suicide) ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತೋರುತ್ತದೆ. ಆದರೆ ಮಹಿಳೆ ಹಾಗೂ ಒಂದು ಮಗು ನೆಲದ ಮೇಲೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಗಾಯವಾಗಿರುವುದು ಪತ್ತೆಯಾಗಿರುವುದರಿಂದ ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳನ್ನ ಗುಂಡಿಕ್ಕಿ ಕೊಂದು, ಸೂಟ್ಕೇಸ್ನಲ್ಲಿ ಬಿಸಾಡಿದ ತಂದೆ
ಪ್ರಕಾಶ್ ಮೊದಲು ತನ್ನ ಪತ್ನಿ ಮತ್ತು ಒಂದು ಮಗುವನ್ನು ಕತ್ತು ಹಿಸುಕಿ ಕೊಂದಿದ್ದು, ಬಳಿಕ ಇತರ ಮಕ್ಕಳನ್ನು ನೇಣಿಗೆ ಹಾಕಿ ತಾನು ಕೂಡಾ ನೇಣಿಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.