ಮಂಡ್ಯ: ಪ್ರಸ್ತುತ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಡಿಜಿಟಲ್ ಮಯ. ಚಿಲ್ಲರೆ ಅಂಗಡಿ ಹೋಗಿ ಜನರು ಒಂದು ರೂಪಾಯಿ ನೀಡಬೇಕೆಂದರೂ ತಮ್ಮ ಮೊಬೈಲ್ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂ ಅಥವಾ ಇನ್ಯಾವುದೋ ಆಪ್ ಮೂಲಕ ಆನ್ಲೈನ್ ಟ್ರಾನ್ಸ್ ಫರ್ ಮಾಡುತ್ತಾರೆ. ಇದೀಗ ಈ ಡಿಜಿಟಲ್ ಯುಗ ದೇವಸ್ಥಾನಗಳಿಗೂ ಸಹ ವ್ಯಾಪಿಸುತ್ತಿದೆ. ಮಂಡ್ಯದ ದೇವಸ್ಥಾನವೊಂದರಲ್ಲಿ ಹುಂಡಿಗೆ ಹಣ ಹಾಕಬೇಕಂದ್ರೆ ಕ್ಯೂಆರ್ ಕೋಡ್ ಬಳಸಿಕೊಂಡು ಆನ್ಲೈನ್ ಮೂಲಕ ಕಳಿಸಬಹುದಾಗಿದೆ.
ಜನರು ದೇವಸ್ಥಾನ ಹುಂಡಿಗೆ ಹಣ ಹಾಕುವ ಮೊದಲು ಈ ಹಣ ದೇವರ ಸೇವೆಗೆ ಹೋಗುತ್ತಾ, ಇಲ್ಲ ಅರ್ಚಕರಿಗೆ ಹೋಗುತ್ತೋ ಎಂಬ ಅನುಮಾನಗಳು ತಲೆಯಲ್ಲಿ ಬರುತ್ತವೆ. ಹುಂಡಿ ಹಣ ಎಣಿಕೆ ವೇಳೆ ಸಮಸ್ಯೆಗಳು ಇರುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬ ದೇವವಸ್ಥಾನದಲ್ಲಿ ಡಿಜಿಟಲ್ ಹುಂಡಿಯನ್ನು ಪರಿಚಯಿಸಲಾಗಿದೆ.
ನಿಮಿಷಾಂಬ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬಂದು ನಿಮಿಷಾಂಬಾಗೆ ಪ್ರಾಥನೆ ಸಲ್ಲಿಸುತ್ತಾರೆ. ಈ ದೇವಸ್ಥಾನದಲ್ಲಿ ಇದೀಗ ಡಿಜಿಟಲ್ ಹುಂಡಿಯನ್ನು ಪರಿಚಯಿಸಲಾಗಿದೆ. ಹುಂಡಿ ಎಣಿಕೆಯ ವೇಳೆ ಆಗುತ್ತಿದ್ದ ತೊಂದರೆಗಳು, ಹುಂಡಿ ಹಣದ ಸುರಕ್ಷತೆಗಾಗಿ ಇಲ್ಲಿ ಕ್ಯೂಆರ್ ಕೋಡ್ ಇಡಲಾಗಿದೆ. ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಭಕ್ತರು ತಮ್ಮ ಮೊಬೈಲ್ನಲ್ಲಿರುವ ಗೂಗಲ್ ಪೇ, ಫೋನ್ ಪೇ, ಪೇಟಿಯಂ ಅಥವಾ ಇನ್ಯಾವುದೋ ಆಪ್ ಮೂಲಕ ಆನ್ಲೈನ್ನಲ್ಲಿ ಹುಂಡಿಗೆ ಹಣ ಹಾಕಬಹುದಾಗಿದೆ. ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ
ದೇವಸ್ಥಾನದಲ್ಲಿ ಡಿಜಿಟಲ್ ಹುಂಡಿಯನ್ನು ನೋಡಿದ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಕೆಲಸ. ಸಾಕಷ್ಟು ಜನರ ಹತ್ತಿರ ಚಿಲ್ಲರೆ ಇರುವುದಿಲ್ಲ, ಇದೀಗ ಗೂಗಲ್ ಪೇ ಫೋನ್ ಪೇ ಮೂಲಕ ಎಷ್ಟು ಹಣವನ್ನಾದ್ರು ಸಹ ಹಾಕಬಹುದು. ಅಲ್ಲದೇ ಇದು ನೇರವಾಗಿ ದೇವಸ್ಥಾನದ ಅಕೌಂಟ್ಗೆ ಹೋಗುತ್ತೆ ಎನ್ನುವುದು ನಮಗೆ ನೆಮ್ಮದಿ ಎಂದು ಭಕ್ತರು ಹೇಳುತ್ತಾರೆ. ನಿಮಿಷಾಂಬಾ ದೇವಸ್ಥಾನದಲ್ಲಿ ಡಿಜಿಟಲ್ ಹುಂಡಿಯನ್ನು ಪರಿಚಯ ಮಾಡಿರುವುದು ಡಿಜಿಟಲೀಕರಣಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಭಕ್ತರು ಸಹ ಈ ವಿಚಾರವನ್ನು ಖುಷಿಯಿಂದಲೇ ಸ್ವೀಕಾರ ಮಾಡಿದ್ದಾರೆ.