ಮಡಿಕೇರಿ: ಕೊಡಗಿನ ಶಾಲೆಯಲ್ಲಿ ಭಜರಂಗದಳ ವಿಶ್ವ ಹಿಂದೂ ಪರಿಷತ್ನ ಶೌರ್ಯ ಪ್ರಶಿಕ್ಷಣ ತರಬೇತಿ ವಿವಾದದ ವಿಚಾರದಲ್ಲಿ ಕಡೆಗೂ ಶಾಲಾ ಆಡಳಿತ ಮಂಡಳಿ ಮೌನ ಮುರಿದಿದೆ. ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದೇ ಇಲ್ಲ ಎಂದು ಶಾಲಾಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇದರ ನಡುವೆ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆ ಬಿಟ್ಟಿರೋದು ಹೊಸ ವಿವಾದಕ್ಕೆ ಮುನ್ನುಡಿ ಬರೆದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀ ಸಾಯಿ ವಿದ್ಯಾ ಸಂಸ್ಥೆಯಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನಡೆಸಿದ್ದ ತ್ರಿಶೂಲ ದೀಕ್ಷೆ ಹಾಗೂ ಶಸ್ತ್ರಾಸ್ತ್ರ ತರಬೇತಿ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಮೌನ ಮುರಿದಿದ್ದು, ಶಾಲಾ ವ್ಯಾಪ್ತಿಯಲ್ಲಿ ಬಂದೂಕು ತರಬೇತಿ ನಡೆದಿಲ್ಲ ಎಂದು ಸ್ಪಷ್ಪಡಿಸಿದೆ. ಅಲ್ಲದೆ ರಾಜಕೀಯ ವಿಚಾರಕ್ಕೆ ಶಾಲೆಯ ಹೆಸರನ್ನು ಎಳೆದು ತರದಂತೆ ಮನವಿ ಮಾಡಿದೆ. ಇದೇ ವೇಳೆ ಮಹತ್ವದ ಮಾಹಿತಿ ನೀಡಿರುವ ಶಾಲಾ ಆಡಳಿತ ಮಂಡಳಿ, ದುಬೈ ಕರೆಯ ಬಗ್ಗೆ ಹೊಸ ಬಾಂಬ್ ಸಿಡಿಸಿದೆ. ಪ್ರಕರಣದ ಬಳಿಕ ಹೊರ ದೇಶದಿಂದ ಕರೆ ಬಂದಿದ್ದು, ಕರೆಯ ಪರಿಣಾಮ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆ ಎಂದಿದೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ
ಇದು ಸದ್ಯ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಮೂವರು ವಿದ್ಯಾರ್ಥಿಗಳ ಪೋಷಕರಿಗೆ ವಿದೇಶದಿಂದ ದೂರವಾಣಿ ಕರೆ ಮಾಡಿ ತಮ್ಮ ಮಕ್ಕಳನ್ನು ಆ ಶಾಲೆಯಲ್ಲಿ ಓದಿಸಬೇಡಿ ಆ ಶಾಲೆಗೆ ನೀವು ಕಟ್ಟಿರುವ ಶಾಲಾ ಶುಲ್ಕವನ್ನು ನಾವು ಪಾವತಿ ಮಾಡುತ್ತೇವೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಓದುವ ಶಾಲೆಗೆ ಸೇರಿಸುವಂತೆ ಕರೆ ಬಂದಿರುವ ಮಾಹಿತಿ ಇದೆ. ಹಾಗಾಗಿ ಹೊರ ದೇಶದಿಂದ ಕರೆ ಮಾಡಿದವರ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ವಿದೇಶದಿಂದ ಕರೆ ಬಂದಿದ್ದು ಯಾರಿಂದ ಅದನ್ನು ಸಂಬಂಧಿಸಿದಂತೆ ಇಲಾಖೆ ತನಿಖೆ ನಡೆಸಬೇಕು ಎಂದು ವಿಎಚ್ಪಿ ಅಧ್ಯಕ್ಷ ಕೃಷ್ಣಮೂರ್ತಿ ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಫ್ಯಾಮಿಲಿ ಫೋಟೋ ಶೇರ್ ಮಾಡಿದ ರಶ್ಮಿಕಾ ಮಂದಣ್ಣ
ಪ್ರಕರಣದ ಕೇಂದ್ರ ಬಿಂದುವಾಗಿದ್ದ ಶ್ರೀ ಸಾಯಿ ವಿದ್ಯಾಸಂಸ್ಥೆ ಕಡೆಗೂ ಮೌನ ಮುರಿದು ಹೊಸ ಬಾಂಬ್ ಸಿಡಿಸಿದೆ. ತರಬೇತಿ ಶಾಲಾ ವ್ಯಾಪ್ತಿಯಲ್ಲಿ ನಡೆದಿಲ್ಲ ಅನ್ನೋದಕ್ಕಿಂತ ಸದ್ಯ ಪ್ರಕರಣದ ಬಳಿಕ ಹೊರ ದೇಶದಿಂದ ಬಂದ ಕರೆ ಹಾಗೂ ಶಾಲೆಯಿಂದ ಮೂವರು ಮುಸ್ಲಿಂ ಮಕ್ಕಳು ಟಿಸಿ ಪಡೆದು ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.